ಭಟ್ಕಳ: 2019-20ನೇ ಸಾಲಿನ ಆರೋಗ್ಯ ಇಲಾಖೆಯ ಕಾಯಕಲ್ಪ ಕಾರ್ಯಕ್ರಮ ಅನುಷ್ಠಾನ ಯೋಜನೆಯಡಿಯಲ್ಲಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರವು, ಜಿಲ್ಲೆಯ ತಾಲೂಕಾ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಜಂಟಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಆಸ್ಪತ್ರೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸ್ವಚ್ಛತೆ, ಸಾರ್ವಜನಿಕ ಸ್ಪಂದನೆ, ಗರ್ಭಿಣಿ, ತಾಯಿ ಮತ್ತು ಮಕ್ಕಳ ಆರೋಗ್ಯ, ಉತ್ತಮ ಚಿಕಿತ್ಸೆ, ತ್ಯಾಜ್ಯ ವಿಲೇವಾರಿ ಹಾಗೂ ಸೋಂಕಿನ ನಿವಾರಣೆ ಇತ್ಯಾದಿ ಒಳಗೊಂಡಂತೆ ಸರಕಾರದ ಕಾಯಕಲ್ಪ ಕಾರ್ಯಕ್ರಮದ ನಿಯಮಾವಳಿಯನ್ನು ಅನುಷ್ಠಾನಕ್ಕೆ ತಂದಿರುವ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರವು, 93.9% ಪ್ರತಿಶತ ಅಂಕಗಳನ್ನು ಪಡೆದು ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 15ನೇ ಸ್ಥಾನವನ್ನು ಪಡೆದಿದೆ.
ಹೆರಿಗೆ ವಿಭಾಗ ಹಾಗೂ ಶಸ್ತ್ರಚಿಕಿತ್ಸಾ ಗುಣಮಟ್ಟದ ಮಾಪನದಲ್ಲಿ (ಎಲ್ಎಕ್ಯೂಎಸ್ಎಚ್ವಾಯ್ಎ) ರಾಜ್ಯದಿಂದ ಪ್ರಮಾಣ ಪತ್ರ ಪಡೆದಿರುವ ಜಿಲ್ಲೆಯ ಮೊದಲ ಹಾಗೂ ಏಕೈಕ ಆಸ್ಪತ್ರೆ ಇದಾಗಿದ್ದು, ರಾಷ್ಟ್ರೀಯ ಪ್ರಮಾಣ ಪತ್ರಕ್ಕೆ ಆಯ್ಕೆಯಾಗಿರುವುದು ಶಿರಾಲಿ ಆರೋಗ್ಯ ಕೇಂದ್ರದ ಇನ್ನೊಂದು ವಿಶೇಷವಾಗಿದೆ.
ಆಸ್ಪತ್ರೆಯ ಈ ಸಾಧನೆಗೆ ಇಲ್ಲಿನ ವೈದ್ಯಾಧಿಕಾರಿಗಳು, ಶುಶ್ರೂಷಕರು, ಸಿಬ್ಬಂದಿಗಳು ಹಾಗೂ ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಪರಿಶ್ರಮ ಹಾಗೂ ಶಿರಾಲಿಯ ನಾಗರಿಕರು, ದಾನಿಗಳು, ಹಿಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಈಗಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಗಳಾದ ಡಾ. ಶರದ್ ನಾಯಕ್ರ ಸಹಕಾರವೇ ಕಾರಣವಾಗಿದೆ.
ನಮ್ಮ ಆಸ್ಪತ್ರೆಗೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ. ಅಂಬ್ಯುಲೆನ್ಸ್ ಸೇವೆ, ಸ್ಕ್ಯಾನಿಂಗ್ ಉಪಕರಣ ಹಾಗೂ ಸುಧಾರಿತ ಎಕ್ಸ್-ರೇ ಉಪರಕಣಗಳು, ಜೊತೆಗೆ ಆಸ್ಪತ್ರೆಗೆ ಮೇಲ್ಛಾವಣಿ ಹಾಗೂ ಸುಣ್ಣಬಣ್ಣದ ಅವಶ್ಯಕತೆ ಇದ್ದು, ಸ್ಥಳೀಯ ಶಾಸಕರು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.