ಅರಬ್ಬರು ಮೊದಲು ಕಾಲಿಟ್ಟ, ಟಿಪ್ಪು ಒಪ್ಪಿದ ಚೆನ್ನಾಭೈರಾದೇವಿಯ ನೆಲವೀಗ ಕೊಳಕು ತುಂಬಿದ ಪ್ರದೇಶ 

Source: S O New Service | By V. D. Bhatkal | Published on 30th August 2019, 8:25 PM | Coastal News | Special Report |

ಭಟ್ಕಳ: ತಾಲೂಕಿನ ಶರಾಬಿ ಹೊಳೆಯ ದಂಡೆಯ ಈ ಪ್ರದೇಶಕ್ಕೆ ದೊಡ್ಡದೊಂದು ಇತಿಹಾಸ ಇದೆ. ವ್ಯಾಪಾರ ವಹಿವಾಟು ಮಾಡಿಕೊಂಡು ಬಂದು ಅರಬ್ಬರು ಮೊದಲು ಕಾಲಿಟ್ಟ ಈ ಪ್ರದೇಶ ಈಗ ಮನುಷ್ಯ ಕಾಲಿಡಲಾಗದ ಕೊಳಕು ಪ್ರದೇಶವಾಗಿ ಪರಿಣಮಿಸಿದೆ. ಆದರೆ ಅದೇ ಅರಬ್ಬರ ಸಂತತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಇಲ್ಲಿನ ಬಹುಸಂಖ್ಯಾತ ಪಟ್ಟಣ ವಾಸಿಗಳು, ಅವರ ನಾಯಕರು ಕಣ್ಣಿದ್ದೂ ಕುರುಡರಂತಾಗಿದ್ದಾರೆ.

ಶರಾಬಿ ನದಿ ದಂಡೆಯ ಇತಿಹಾಸವನ್ನು ಗಮನಿಸಿದರೆ ಮೈ ಮನ ರೋಮಾಂಚನಗೊಳ್ಳುತ್ತದೆ. ಅರಬ್ಬರು ಇದೇ ನದಿ ದಂಡೆಯ ಮೇಲೆ ಬಟ್ಟೆ, ಬರೆಗಳನ್ನು ಇಟ್ಟು ವ್ಯಾಪಾರ ಮಾಡಿದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಹಾಸು ಕಲ್ಲುಗಳನ್ನು ಇಟ್ಟು ನಮಾಜು ಮಾಡಿದ್ದಾರೆ. ನಂತರದ ದಿನಗಳಲ್ಲಿ ರಾಣಿ ಚೆನ್ನಾಭೈರಾದೇವಿಯೂ ಕಾಳು ಮೆಣಸನ್ನು ತಂದು ಇದೇ ಜಾಗದಲ್ಲಿ ಅರಬ್ಬರೊಂದಿಗೆ ವ್ಯಾಪಾರ ನಡೆಸಿದ್ದಾಳೆ. ಅಷ್ಟೇ ಅಲ್ಲ, ಮೈಸೂರನ್ನು ಆಳಿದ ಟಿಪ್ಪು ಇದೇ ಜಾಗದಿಂದ ಅರಬ್ಬರು ತಂದ ಕುದುರೆಗಳನ್ನು ಖರೀದಿಸಿ ಮೈಸೂರಿಗೆ ಪ್ರಯಾಣಿಸಿರುವುದು ಇತಿಹಾಸದಲ್ಲಿ ಉಳಿದುಕೊಂಡಿದೆ. ಆದರೆ ರಾಜ, ರಾಣಿ ಓಡಾಡಿದ, ಅರಬ್ಬರಿಗೆ ನೆಲೆ ಕೊಟ್ಟ ಈ ಹೊಳೆ, ಹೊಳೆಯ ದಂಡೆ ಇದೀಗ ಯಾರೂ ಕಾಲಿಡಲಾಗದ ಕೊಳಕು ಪ್ರದೇಶವಾಗಿದೆ. ಅರಬ್ಬರ ಕಲ್ಲುಗಳು ಅನಾಥವಾಗಿ ಬಿದ್ದುಕೊಂಡಿವೆ. ಹೊಳೆಯ ದಂಡೆಯ ಕಲ್ಲುಗಳು ಕೆಲವಷ್ಟು ಹೊಳೆಗೆ ಜಾರಿ ಹೋದರೆ, ಇನ್ನು ಕೆಲವು ಬೀಳುವ ಹಂತದಲ್ಲಿವೆ. ಹೊಳೆಯ ತುಂಬ ಹೂಳು ತುಂಬಿಕೊಂಡು ಮಳೆಗಾಲದಲ್ಲಿ ಸಂಕಷ್ಟ ತಂದೊಡ್ಡುವ ಪ್ರದೇಶವಾಗಿ ಬದಲಾಗಿದೆ. ಸಾಲದೆಂಬಂತೆ ಊರು ಕೇರಿಯ ಶೌಚಾಲಯಗಳ ನೀರನ್ನೆಲ್ಲ ನೇರವಾಗಿ ಈ ಹೊಳೆಗೆ ಬಿಡಲಾಗುತ್ತಿದೆ. ಅಲ್ಲಿಯೇ ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕದ ನೀರು ಸಹ ಆಗಾಗ್ಗೆ ಹೊಳೆಗೆ ಹರಿದು ಹೋಗುತ್ತಲೇ ಇದೆ. ಪರಿಣಾಮವಾಗಿ ಯಾವುದೇ ಮನುಷ್ಯ ಇಲ್ಲಿ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯೇ ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರು ಆತಂಕದಿಂದಲೇ ದಿನದೂಡುತ್ತಿದ್ದಾರೆ. ಈಜು ಹುಚ್ಚಿನ ಹುಡುಗರು ಈ ಭಾಗದಲ್ಲಿ ನೀರಿಗೆ ಕಾಲಿಡದೇ ಕೆಲವು ವರ್ಷಗಳೇ ಉರುಳಿ ಹೋಗಿವೆ. ಅಲ್ಲಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿದೆ ಎಂದರೆ ಮೀನಿಗೆ ಗಾಳ ಹಾಕಲೂ ಜನರು ಹೇಸಿಗೆ ಪಟ್ಟುಕೊಳ್ಳುತ್ತಿದ್ದಾರೆ. 

ಪ್ರವಾಸಿ ತಾಣವಾಗಲು ಯೋಗ್ಯ: 
 ಐತಿಹಾಸಿಕ ಮಹತ್ವ ಹೊಂದಿರುವ ಈ ಶರಾಬಿ ನದಿ ದಂಡೆಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಅವಕಾಶ ಇದೆ. ಹೊಳೆಯನ್ನು ಶುಚಿಗೊಳಿಸಿ ದೋಣಿ ತೇಲಾಡಿದರೆ ಪ್ರವಾಸಿಗರು ಬಂದೇ ಬರುತ್ತಾರೆ. ದಂಡೆಯ ಉದ್ಧಕ್ಕೂ ಸರಿಯಾದ ಗೋಡೆ ನಿರ್ಮಿಸಿ, ವಿದ್ಯುದ್ದೀಪ ಅಳವಡಿಸಿದರೆ ಆಗಲೂ ಒಂದಷ್ಟು ಜನರು ಅಲ್ಲಿ ಬಂದು ವಿಶ್ರಾಂತಿ ಪಡೆಯಬಹುದು. ವಿಶೇಷ ಎಂದರೆ ಈ ಪ್ರದೇಶ ಭಟ್ಕಳ ಪುರಸಭಾ ವ್ಯಾಪ್ತಿಗೆ ಒಳಪಡುತ್ತದೆ. ಪುರಸಭಾ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಜನರು ತಾವು ಅರಬ್ ಸಂತತಿಯವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಿನ ಸುಲ್ತಾನ್ ಸ್ಟ್ರೀಟ್ ಹುಟ್ಟಿಗೆ ಕಾರಣನಾದ ಟಿಪ್ಪು ಸುಲ್ತಾನನ ಬಗ್ಗೆಯೂ ಇವರಿಗೆ ಹೆಚ್ಚಿನ ಒಲವಿದೆ. ಪುರಸಭಾ ಆಡಳಿತವನ್ನು ಕಳೆದ ಹಲವು ವರ್ಷಗಳಿಂದ ಇಲ್ಲಿನ ಮಜ್ಲಿಸೇ ಇಸ್ಲಾ ವ ತಂಜೀಮ್‍ಗೆ ನಿಷ್ಠೆಯನ್ನು ಹೊಂದಿದವರೇ ನಿಭಾಯಿಸುತ್ತ ಬಂದಿದ್ದಾರೆ. ಆದರೆ ತಮ್ಮದೇ ಪೂರ್ವಜರಿಗೆ ನೆಲೆ ಕೊಟ್ಟ ಈ ನೆಲವನ್ನು ಅಭಿವೃದ್ಧಿಪಡಿಸುವ ಕಾಳಜಿ ಯಾರಿಗೂ ಇದ್ದಂತೆ ಕಾಣಿಸುತ್ತಿಲ್ಲ. ಭಟ್ಕಳದ ಬಗ್ಗೆ ತರೇವಾರಿ ಭಾಷಣಗಳು ಶರಾಬಿ ಹೊಳೆಯಲ್ಲಿ ತೇಲಿ ಹೋಗುತ್ತಲೇ ಇವೆ!

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...