ಭಟ್ಕಳ: ತಾಲೂಕಿನ ಜಾಲಿ ಪ.ಪಂ ಹಾಗು ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ಕಾಮಾಗಾರಿಗೆ ಪ.ಪಂ ಹಾಗೂ ಪುರಸಭೆ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ವಿರದ್ಧ ತಿರುಗಿ ಬಿದ್ದಿದ್ದು ಯಾವುದೇ ಕಾರಣಕ್ಕೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿನಗರದಲ್ಲಿ ಒಳಚರಂಡಿ ವೆಟ್ವೆಲ್ ಕಾಮಾಗಾರಿಯನ್ನು ಕೈಗೊಳ್ಳಬಾರದೆಂದು ಆಕ್ಷೇಪ ವ್ಯಕ್ತಪಡಿಸಿದರು.
ಗುರುವಾರದಂದು ಭಟ್ಕಳದ ಪುರಸಭೆಯ ಸಭಾಂಗಣದಲ್ಲಿ ಸಹಾಯಕ ಆಯುಕ್ತ ಸಾಜಿದ್ ಮುಲ್ಲಾರ ಅಧ್ಯಕ್ಷತೆಯಲ್ಲಿ ಜರಗಿದ ಒಳಚರಂಡಿ ಕಾಮಾಗಾರಿ ಅನುಷ್ಠಾನ ಸಭೆಯಲ್ಲಿ ಜಾಲಿ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಮಾಜಿ ಅಧ್ಯಕ್ಷ ಪಣಂಬೂರು ಆದಮ್, ಜಾಲಿ ಪ.ಪಂ ವ್ಯಾಪ್ತಿಯ ದೇವಿನಗದಲ್ಲಿ ಪ್ರಸ್ತಾವಿತ ವೆಟ್ವೆಲ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಆ ಭಾಗದಲ್ಲಿ ಶಾಲೆ, ಮಂದಿರ, ಮಸೀದಿ ಹಾಗೂ ಕುಡಿಯುವ ನೀರಿನ ಬಾವಿಗಳಿದ್ದು ವೆಟ್ವೆಲ್ ನಿರ್ಮಾಣದಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಉಲ್ಭಣಗೊಳ್ಳುವ ಅಪಾಯವಿದ್ದು ಕಾಮಾಗಾರಿಗೆ ಅನುಮತಿ ನೀಡಕೂಡದು ಎಂದು ಪಟ್ಟು ಹಿಡಿದಿದ್ದು ಇದಕ್ಕೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ದ್ವನಿಗೂಡಿಸಿದರು. 2017ರಲ್ಲಿಯೇ ಈ ಭಾಗದಲ್ಲಿ ವೆಟ್ವೆಲ್ ನಿರ್ಮಾಣ ವಿರೋಧಿ ಜಾಲಿ ಪಂಚಾಯತ್ ಠರಾವು ಪಾಸು ಮಾಡಿದ್ದು ಇದನ್ನು ನಿರ್ಲಕ್ಷಿಸುವುದರ ಮೂಲಕ 2019ರಲ್ಲಿ ಟೆಂಡರ್ ಕರೆಯಲಾಗಿದೆ ಇಲ್ಲಿನ ಜನಪ್ರತಿನಿಧಿಗಳಿಗೆ ಯಾವುದೇ ಬೆಲೆ ಇಲ್ಲವಾಗಿದೆ ಎಂದು ಸದಸ್ಯರು ಸಹಾಯಕ ಆಯುಕ್ತ ಸಾಜಿದ್ ಮುಲ್ಲಾರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸ ರಕ್ಷಣೆಯಲ್ಲಿ ಕಾಮಗಾರಿ ಆರಂಭಿಸುವ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ಯಾವುದೇ ಕಾರಣಕ್ಕೂ ಆಗಲು ಬಿಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ಸದಸ್ಯರು ಸಭೆಯ ಮೂಲಕ ರವಾನಿಸಿದ್ದಾರೆ. ಭಟ್ಕಳ ತಾಲೂಕಿನಾದ್ಯಂತ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ಮತ್ತೇ ಹೊಸದಾಗಿ ಸಮಸ್ಯೆಗಳನ್ನು ಸೃಷ್ಠಿಸಲು ಮುಂದಾಗಿರುವುದು ಜನರನ್ನು ನರಕಯಾತನೆಗೆ ನೂಕುವ ಪ್ರಯತ್ನವಾಗಿದೆ ಎಂದೂ ಸದಸ್ಯರು ಆರೋಪಿಸಿರು. ಭಟ್ಕಳದ ಗೌಸಿಯಾ ಸ್ಟ್ರೀಟ್ ಪಕ್ಕದಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ಆರಂಭಿಸುವ ಪ್ರಸ್ತಾಪಿಸಿದ ಪುರಸಭೆ ಸದಸ್ಯರು ಶರಾಬಿ ಹೊಳೆಯಲ್ಲಿ ಘಟಕವನ್ನು ಆರಂಭಿಸಲು ಸ್ಥಳವೆಲ್ಲಿದೆ? ಅಕ್ಕಪಕ್ಕದಲ್ಲಿ ಪುರಾತನ ಮಸೀದಿಯೊಂದಿದ್ದು ಕಾಮಗಾರಿ ಆರಂಭಿಸುವ ಪೂರ್ವ ಪರಿಶೀಲಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ, ಜಾಲಿ ಪ.ಪಂ ಹಾಗೂ ಭಟ್ಕಳ ಪುರಸಭೆ ಸದಸ್ಯ ಆಕ್ಷೇಪಗಳನ್ನು ದಾಖಲಿಸಿಕೊಳ್ಳಲಾಗಿದ್ದು ಯಾವುದೇ ಕಾರಣಕ್ಕೂ ಕಾಮಾಗಾರಿಯ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡಿಯೇ ಮುಂದುವರೆಯಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ ವಿ.ಪಿ. ಕೊಟ್ರಳ್ಳಿ, ಒಳಚರಂಡಿ ಇಲಾಖೆಯ ಇಂಜಿನೀಯರ್ ಸುರೇಶ್, ಅಲ್ತಾಫ್, ಪುರಸಭೆ ಮುಖ್ಯಾಧಿಕಾರಿ ದೇವರಾಜ, ಜಾಲಿ ಪ.ಪಂ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಉಪಸ್ಥಿತರಿದ್ದರು.