ಭಟ್ಕಳ: ಸಹಬಾಳ್ವೆ ಕರ್ನಾಟಕ, ಸದ್ಭಾವನಾ ಮಂಚ್ ಭಟ್ಕಳ ಇದರ ಸಹಯೋಗದೊಂದಿಗೆ ಇಲ್ಲಿನ ಮುಸ್ಲಿಮರ ಸಾಮಾಜಿಕ ರಾಜಕೀಯ ವೇದಿಕೆಯಾಗಿರುವ ಮಜ್ಲಿಸೆ ಇಸ್ಲಾಹ್ -ವ-ತಂಝೀಮ್ ಸಂಸ್ಥೆಯು ಜ.೨೬ ರಂದು ಸಂಜೆ ೪.೩೦ಕ್ಕೆ ತಂಝೀಮ್ ಕಾರ್ಯಲಯದ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಮಿಲನ-೨೦೨೩ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜ.ಇ.ಹಿಂ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಭಾಗವಹಿಸುತ್ತಿದ್ದು ಅತಿಥಿಗಳಾಗಿ ಸದ್ಭಾವನಾ ಮಂಚ್ ಭಟ್ಕಳ ಇದರ ಅಧ್ಯಕ್ಷ ಸತೀಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ವಹಿಸಲಿದ್ದಾರೆ.
ಪರಸ್ಪರ ನಂಬಿಕೆ, ವಿಶ್ವಾಸದೊಂದಿಗೆ ಜೀವಿಸುವುದು ಪ್ರತಿಯೊಬ್ಬ ನಾಗರೀಕನು ತನ್ನ ಘನತೆ ಮತ್ತು ಗೌರವದೊಂದಿಗೆ ಎಲ್ಲರೊಡನೆ ಒಂದಾಗಿ ಬದುಕುವುದು ಸಂವಿಧಾನದ ಆಶಯವಾಗಿದೆ. ಭಟ್ಕಳದಲ್ಲಿ ನಾವೆಲ್ಲರೂ ಒಂದು ಎಂಬ ಉದಾತ್ತ ಆಶಯಗಳೊಂದಿಗೆ ತಂಝೀಮ್ ಸಂಸ್ಥೆಯು ಕಳೆದ ನೂರು ವರ್ಷಗಳಿಂದ ಸಮಾಜಸೇವಾ ಕಾರ್ಯದಲ್ಲಿ ಸಕ್ರೀಯವಾಗಿದೆ.
ದೇಶದ ೭೪ನೆ ಗಣರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಇಲ್ಲಿನ ಹಿಂದೂ-ಮುಸ್ಲಿಮ್ ಎಲ್ಲ ಸಮುದಾಯದವರು ಕೂಡಿ “ಗಣರಾಜ್ಯೋತ್ಸವ ಮಿಲನ-೨೦೨೩ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಎಂದು ಅಬ್ದುಲ್ ರಖೀಬ್ ಎಂ.ಜೆ. ಮನವಿ ಮಾಡಿಕೊಂಡಿದ್ದಾರೆ.