ಭಟ್ಕಳ: ತಾಲೂಕಿನ ಬಸ್ ನಿಲ್ದಾಣದ ಕಟ್ಟಡ ನೆಲಕ್ಕೆ ಬಿದ್ದು 2-3 ದಿನಗಳು ಕಳೆದು ಹೋಗಿದೆ. ಬಸ್ ನಿಲುಗಡೆಗೆ ಪರ್ಯಾಯ ಜಾಗವನ್ನು ಗೊತ್ತು ಮಾಡದ ಕಾರಣ ರಾಷ್ಟ್ರೀಯ ಹೆದ್ದಾರಿಯ ಬದಿಯೇ ಈಗ ಜನರಿಗೆ ನಿಲ್ದಾಣವಾಗಿದೆ.
ನಿತ್ಯವೂ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ಗಾಗಿ ಹೆದ್ದಾರಿಯಂಚಿನಲ್ಲಿ ನಿಂತು ಕಾಯುತ್ತಿದ್ದಾರೆ. ಒಂದು ಕಡೆ ಮಳೆ, ನಿಂತ ಜಾಗದಲ್ಲಿ ಹೊಂಡ, ಕೆಸರಿನ ನೀರು ಪ್ರಯಾಣಿಕರನ್ನು ಹೈರಾಣಾಗಿಸಿದೆ. ದೂರದ ಊರಿಗೆ ಹೊರಟವರು ಬಸ್ ಎಲ್ಲಿ ನಿಲ್ಲುತ್ತದೆ ಎನ್ನುವುದು ಗೊತ್ತಾಗದೇ ಪರದಾಡುತ್ತಿದ್ದಾರೆ. ಮಕ್ಕಳು, ಲಗೇಜ್ ಇದ್ದರಂತೂ ಕೇಳುವುದೇ ಬೇಡ! ಇದ್ದ ಜಾಗದಲ್ಲಿ ಒಂದಕ್ಕಿಂತ ಹೆಚ್ಚು ಬಸ್ಸುಗಳನ್ನು ನಿಲ್ಲಿಸುವುದೂ ಕಷ್ಟಸಾಧ್ಯವಾಗಿದೆ. ಪರಿಣಾಮವಾಗಿ ಬಸ್ ನಿಲ್ದಾಣದ ಎದುರು ನಿತ್ಯವೂ ವಾಹನ ದಟ್ಟನೆ ವಿಪರೀತವಾಗಿದೆ. ಮಕ್ಕಳಿಗೆ, ವಯಸ್ಸಾದವರಿಗೆ ರಸ್ತೆ ದಾಟುವುದು ಸಾಹಸದ ಕೆಲಸವಾಗಿದೆ. ಬಸ್ ಚಾಲಕರು, ನಿರ್ವಾಹಕರಿಗೆ ಬಸ್ಸುಗಳೇ ತಂಗುದಾಣವಾಗಿದೆ.
ಹಳೆಯ ಕಟ್ಟಡ ಉರುಳಿಸಿ ಅಪಾಯವನ್ನು ತಪ್ಪಿಸಿದ ಅಧಿಕಾರಿಗಳು ನಂತರದ ಕೆಲಸ ತಮ್ಮದಲ್ಲ ಎನ್ನುವಂತೆ ಸುಮ್ಮನಿದ್ದು ಬಿಟ್ಟಿದ್ದಾರೆ. ಹಳೆಯ ಬಸ್ ನಿಲ್ದಾಣ ಇದ್ದ ಜಾಗದಲ್ಲಿಯಾದರೂ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಇನ್ನೂ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿಲ್ಲ.
ಕಟ್ಟಡ ಉರುಳಿದ ನಂತರ ಮಣ್ಣು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಆದರೆ ಬಿದ್ದ ಕಟ್ಟಡದ ಒಳಗಿನಿಂದ ತಗಡು, ಶೀಟ್, ಕಬ್ಬಿಣ ಇತ್ಯಾದಿಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿದ್ದು, ಈ ಬಗ್ಗೆ ಇಲ್ಲಿನ ಅಧಿಕಾರಿಗಳು ತಮಗೆ ಮಾಹಿತಿಯೇ ಇಲ್ಲವೆನ್ನುತ್ತಿದ್ದಾರೆ. ಲಕ್ಷಾಂತರ ರುಪಾಯಿ ಗುಜರಿ ಸಾಮಾನುಗಳು ಕುಸಿತಕಂಡ ಬಸ್ನಿಲ್ದಾಣದಲ್ಲಿದ್ದು, ಕಳ್ಳತನವಾಗುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗುತ್ತಿದೆ.