• ಕೂಡಲೆ ಕ್ರಮ ಜರಗಿಸುವಂತೆ ಮುಖ್ಯಾಧಿಕಾರಿಗೆ ಘೇರಾವು
ಭಟ್ಕಳ: ಭಟ್ಕಳ ಪುರಸಭೆಯ ಸಫಾಯಿ ಕರ್ಮಚಾರಿಯೊಬ್ಬರ ಮೇಲೆ ಪುರಸಭೆಯ ಕಿರಿಯ ಆರೋಗ್ಯ ಅಧಿಕಾರಿ ಹಲ್ಲೆ ಮಾಡಿದ್ದು ಅವರ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಪ್ರಭಾರಿ ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾರನ್ನು ಘೇರಾವು ಮಾಡುವುದರ ಮೂಲಕ ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಘಟನೆ ಹಿನ್ನೆಲೆ: ಪುರಸಭೆ ಕರ್ಮಚಾರಿ ಗಣಪತಿ ಮಂಗಳ ಕೊರ್ರಾರ್ ಎಂಬುವವರು ಅನಾರೋಗ್ಯ ಇರುವ ಕಾರಣ ರಜೆಯನ್ನು ಕೇಳಲು ಕಿರಿಯ ಆರೋಗ್ಯಾಧಿಕಾರಿ ಬಳಿ ಬಂದಾಗ ಅವರಿಬ್ಬರ ನಡುವೆ ಮಾತಿನ ಚಕಮಕಿ ಬೆಳೆದು ಆರೋಗ್ಯಾಧಿಕಾರಿ ಗಣಪತಿಯವರ ಕಪಾಳಕ್ಕೆ ಬಾರಿಸಿದರು ಎಂದು ಹೇಳಲಾಗುತ್ತಿದೆ. ವಿಷಯವನ್ನು ತಿಳಿದ ಎಲ್ಲ ಸಫಾಯಿ ಕರ್ಮಚಾರಿಗಳು ಕೂಡಲೆ ಪ್ರತಿಭಟನೆ ನಡೆಸಿ ಕರ್ಮಚಾರಿಯ ಮೇಲೆ ಕೈಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಜರಗಿಸಬೇಕೆಂದು ಪ್ರಭಾರಿ ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾ ರ ಬಳಿಗೆ ಬಂದು ಅವರನ್ನು ಘೇರಾವು ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಕೂಡಲೇ ಪೊಲೀಸ್ ದೂರು ದಾಖಲಿಸಲು ಠಾಣೆಗೆ ತೆರಳಿದ್ದು ದೂರು ದಾಖಲಿಸದೆ ಮರಳಿದ್ದಾರೆ ಎಂದೂ ಹೇಳುತ್ತಿದ್ದು ಇದಕ್ಕೆ ಪೊಲೀಸ್ ಅಧಿಕರಿಗಳು ಪುರಸಭೆ ಅಧಿಕಾರಿ ಹಾಗೂ ಕರ್ಮಚಾರಿಗಳ ಮಧ್ಯೆ ಹೊಂದಾಣಿಕೆಯುಂಟಾಗಿದ್ದರಿಂದಾಗಿ ದೂರು ದಾಖಲಿಸದೆ ಹಾಗೆ ಮರಳಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.