ಮೋದಿಯವರ ಮೌನ ಭಯವನ್ನು ಸೃಷ್ಟಿಸುತ್ತಿದೆ: ಹರಿಪ್ರಸಾದ್
ಭಟ್ಕಳ: ದೇಶದ ಪ್ರಧಾನ ಮಂತ್ರಿಯಾದವರು ಹಿಂಸೆ, ಅಭದ್ರತೆಯ ಖಂಡಿಸಬೇಕು. ಅವರು ಮೌನವಾಗಿರುವುದರಿಂದಲೇ ಕರ್ನಾಟಕ ಕರಾವಳಿಯಲ್ಲಿಯೂ ಗಲಭೆ ಎಬ್ಬಿಸುವ ಕಾರ್ಯವನ್ನು ಅವರ ಬೆಂಬಲಿಗರು ಮಾಡುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಅವರು ರವಿವಾರ ಸಂಜೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಟ್ಕಳಕ್ಕೆ ಬಂದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದ್ದು, ಅದನ್ನು ಕಡೆಗಣಿಸಿ ಗಲಭೆಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಎಚ್ಚರದಿಂದ ಇದ್ದು, ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕಳೆದ ಬಾರಿ ಕರಾವಳಿಯಲ್ಲಿನ ನೈತಿಕ ಪೊಲೀಸ್ಗಿರಿಯಿಂದಾಗಿ ರೋಸಿಹೋದ ಜನರು ಕಾಂಗ್ರೆಸ್ಗೆ ಮತ ನೀಡಿ ಗೆಲ್ಲಿಸಿದ್ದಾರೆ. ಈ ಬಾರಿಯೂ ಬಿಜೆಪಿ ಗಲಭೆ ಸೃಷ್ಟಿಸಿ ಚುನಾವಣೆ ಗೆಲ್ಲುವ ಪ್ರಯತ್ನ ನಡೆಸಿದರೆ ಅದು ಸಫಲವಾಗುವುದಿಲ್ಲ. ಜನರಿಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತಿದ್ದು, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ ತೆಗೆದುಕೊಳ್ಳಲಿದೆ. ಪಕ್ಷ ಬಯಸಿದರೆ ಮಾತ್ರ ಸ್ಪರ್ಧಿಸಲು ಸಿದ್ಧರಿರುವುದಾಗಿ ಪ್ರತಿಕ್ರಿಯಿಸಿದರು.