ಸಾರ್ವಜನಿಕರ ಕುಂದುಕೊರತೆ ಆಲಿಸಿದ ಶಾಸಕ ಸುನಿಲ್ ನಾಯ
• ನಾಗಬನ ಕಂಪೌಂಡ್ ನಿರ್ಮಾಣಕ್ಕ ಸಾರ್ವಜನಿಕರ ಆಗ್ರಹ
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಶನಿವಾರ ಇಲ್ಲಿನ ತಹಸಿಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿದರು.
ತಹಸಿಲ್ದಾರ ಕಾರ್ಯಲಯದಲ್ಲಿ ನಡೆಯುವ ಕೆಲಸ ಕಾರ್ಯಗಳಿಂದ ಸಾರ್ವಜನಿಕರು ಅತೃಪ್ತರಾಗಿದ್ದು ಈ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಶನಿವಾರ ಕಚೇರಿಯಲ್ಲೇ ಠಿಕಾಣಿ ಹೂಡಿದ ಶಾಸಕರು ಅಲ್ಲಿಗೆ ಬಂದಂತಹ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವತಃ ಆಲಿಸಿ ಅಧಿಕಾರಿಗಳಿಂದ ಉತ್ತರ ಪಡೆದುಕೊಂಡರು.
ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕರಿಂದ ಮಾಹಿತಿ ಪಡೆದ ಅವರು, ಪಡಿತರ ಚೀಟಿಗಳಲ್ಲಿ ಉಂಟಾಗಿರುವ ಹೆಚ್ಚಳದ ಕುರಿತಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವ ಕುರಿತಂತೆ ನಾನು ಯಾರ ಮೇಲೂ ಒತ್ತಡ ಹೇರಲ್ಲ. ಆದರೆ ಬಡವರ ಹಕ್ಕನ್ನು ಉಳ್ಳವರು ಕಬಳಿಸುವಂತಾಗಬಾರದು, ಕಾನೂನು ರಿತ್ಯ ಬಡವರಿಗೆ ಸಿಗಬೇಕಾದ ಹಕ್ಕನ್ನು ಯಾರು ಕೂಡ ಕಸಿಯುವಂತಿಲ್ಲ ಎಂದರು. ಹಲವು ಕೆಲಸಗಳಿಗೆ ಸಾರ್ವಜಿನಕರು ಎಜೆಂಟರನ್ನು ಅವಲಂಬಿಸುತ್ತಿರುವುದು ಸರಿಯಲ್ಲ. ಪ್ರತಿಯೊಂದು ಕೆಲಸವು ನೆಮ್ಮದಿ ಕೇಂದ್ರಗಳಿಂದ ತ್ವರಿತಗತಿಯಲ್ಲಿ ಆಗಬೇಕು ಎಂದರು. ಒಂದೆರಡು ದಾಖಲೆಗಳನ್ನು ಪಡೆಯಲು ನಿತ್ಯವೂ ಸಾರ್ವಜನಿಕರು ತಹಸಿಲ್ದಾರ ಕಚೇರಿ ಅಲೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ತಾಲೂಕಿನ ಎಲ್ಲ ಕಂದಾಯ ಅಧಿಕಾರಿಗಳು ತಿಂಗಳಿಗೆ ಒಮ್ಮೆಯಾದರೂ ಒಂದೇ ಸ್ಥಳದಲ್ಲಿ ಸಿಗುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಾಗಬನಕ್ಕೆ ಕಂಪೌಂಡ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ಮನವಿ: ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ನಾಗಬನದ ಕಂಪೌಂಡ್ ನಿರ್ಮಾಣಕ್ಕಾಗಿ ಈಗಾಗಲೆ ಹಣ ಮಂಜೂರಿಯಾಗಿದ್ದು ಅದನ್ನು ನಿರ್ಮಿಸದೆ ಇರುವುದರಿಂದ ಕೂಡ ನಾಗಬನ ಕಂಪೌಂಡ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಸಾರ್ವಜನಿಕರು ತಹಸಿಲ್ದಾರರಿಗೆ ಮನವಿಯನ್ನು ಅರ್ಪಿಸಿದರು.