ಭಟ್ಕಳ ಮೀಡಿಯಾ ಕಪ್ ಫೈನಲ್ನಲ್ಲಿ ಹೆಸ್ಕಾಂ ವಿರುದ್ಧ ಅಗ್ನಿಶಾಮಕದಳದ ತಂಡಕ್ಕೆ ಜಯ
ಭಟ್ಕಳ: ನಗರದ ಸರಕಾರಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ಮೀಡಿಯಾ ಕಪ್ 2022 ಕ್ರಿಕೆಟ್ ಪೈನಲ್ ಪಂದ್ಯಾವಳಿಯಲ್ಲಿ ಅಗ್ನಿಶಾಮಕದಳ ತಂಡವು ಹೆಸ್ಕಾಂ ತಂಡವನ್ನು 5 ರನ್ನುಗಳಿಂದ ಸೋಲಿಸಿ 'ಮಾಧ್ಯಮ ಕಪ್'ನ್ನು ತನ್ನದಾಗಿಸಿಕೊಂಡಿದೆ.
ಶನಿವಾರ ಮತ್ತು ಭಾನುವಾರದಂದು ನಗರದ ಸರಕಾರಿ ಕ್ರೀಡಾಂಗಣದಲ್ಲಿ ಭಟ್ಕಳ ಮಾಧ್ಯಮ ಮಿತ್ರರ ವತಿಯಿಂದ, ವಿವಿಧ ಇಲಾಖೆಗಳ ನೌಕರರಿಗೆ ಏರ್ಪಡಿಸಿದ್ದ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಅಗ್ನಿಶಾಮಕ ದಳ ತಂಡ ಮೊದಲು ಟಾಸ್ ಗೆದು 8 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿತು.
ಅಗ್ನಿಶಾಮಕ ತಂಡದ ಶ್ರೀಕಾಂತರವರು ಅತ್ಯಧಿಕ 42 ರನ್ ಗಳಿಸಿದರು. ಭಟ್ಕಳ ಹೆಸ್ಕಾಂ ತಂಡದವರು 8 ಓವರುಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 75 ರನ್ನು ಗಳಿಸಿ ಸೋಲನ್ನು ಒಪ್ಪಿಕೊಂಡರು. ಹೆಸ್ಕಾಂ ತಂಡದ ಉಸ್ಮಾನ 24, ಶ್ರೀಧರ 19 ರನ್ ಗಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಪೈನಲ್ ಪಂದ್ಯದ ಬಹುಮಾನ ವಿತರಣಾ ಅತಿಥಿಗಳಾಗಿ ಉಪಸ್ಥಿತರಿದ್ದ ರಂಜನ್ ಗ್ಯಾಸ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ, ರನ್ನರ್ ತಂಡವಾದ ಹೆಸ್ಕಾಂ ತಂಡದವರಿಗೆ ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನವನ್ನು ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ಅಗ್ನಿಶಾಮಕ ತಂಡದವರಿಗೆ ನೀಡಿದರು. ಪಂದ್ಯಾವಳಿಯ ಉತ್ತಮ ಬ್ಯಾಟ್ಸಮನ್ ಆಗಿ ಅಗ್ನಿಶಾಮಕ ಠಾಣೆ ಯ ಆಟಗಾರ ನಾಗರಾಜ್ ಆಯ್ಕೆಗೊಂಡರು. ಉತ್ತಮ ಎಸೆತಗಾರರಾಗಿ ಹೆಸ್ಕಾಂ ತಂಡದ ಶ್ರೀಧರ ಆಯ್ಕೆಯಾದರು. ಪೈನಲ್ ಪಂದ್ಯದ ಉತ್ತಮ ಆಟಗಾರರಾಗಿ ಅಗ್ನಿಶಾಮಕ ಠಾಣೆಯ ಶ್ರೀಕಾಂತ ಆಯ್ಕೆಯಾದರು. ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಅಗ್ನಿಶಾಮಕ ತಂಡದ ಶ್ರೀಕಾಂತ ಆಯ್ಕೆಯಾದರು.
ವೇದಿಕೆಯಲ್ಲಿ ಮಾಜಿ ಸೈನಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸಾಹಿಲ್ ಆನೈನ್ ಸಂಪಾದಕ ಇನಾಯತುಲ್ಲಾ ಗವಾಯಿ, ಜೆಸಿಐ ಅಧ್ಯಕ್ಷ ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಅಧ್ಯಕ್ಷ ಮನಮೋಹನ ನಾಯ್ಕ ವಹಿಸಿದ್ದರು. ಪತ್ರಕರ್ತರಾದ ಕುಮಾರ ನಾಯ್ಕ ಹಾಗೂ ಮುಬಾಶಿರ್ ಹಲ್ಲಾರೆ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತರಾದ ಪ್ರಸನ್ನ ಭಟ್ ಹಾಗೂ ಉದಯ ನಾಯ್ಕ, ಮಂಜು ನಾಯ್ಕ ಸಹಕರಿಸಿದರು. ಗುರುರಾಜ್ ನಾಯ್ಕ ಹಾಗೂ ವೆಂಕಟೇಶ ಮೊಗೇರ ಪಂದ್ಯಾವಳಿಯಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.