ಭಟ್ಕಳ:ತಾಲೂಕಿನ ಜಾಲಿಪಟ್ಟಣ ಪಂಚಾಯತ ವ್ಯಾಪ್ತಿಯ ವಿವಿದೆಡೆ ಸರಕಾರಿ ಹಾಡಿಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಲಾದ ಮನೆ ಹಾಗೂ ಅಳವಡಿಸಲಾದ ತಂತಿ ಬೇಲಿಯನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ನಡೆದಿದೆ.
ಜಾಲಿ ಪಟ್ಟಣ ಪಂಚಾಯತ ಸರಕಾರಿ ಭೂಮಿ ಸರ್ವೇ ನಂಬರ್ 116ರಲ್ಲಿ ಮನೆಯನ್ನು ನಿರ್ಮಿಸಲಾಗಿದ್ದರೆ, ಸ.ನಂ.246ರಲ್ಲಿ ಮನೆಗೆ ಅಡಿಪಾಯ ತೆಗೆಯುವ ಪ್ರಯತ್ನ ನಡೆದಿತ್ತು. ಅಲ್ಲದೇ ಸರ್ವೇ ನಂಬರ್ 105ರಲ್ಲಿ ಸರಕಾರಿ ಭೂಮಿಯ ಸುತ್ತ ತಂತಿ ಬೇಲಿಯನ್ನು ಅಳವಡಿಸಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿತ್ತು. ಈ ಕುರಿತು ಬಂದ ದೂರುಗಳನ್ನು ಆಧರಿಸಿ ಸಹಾಯಕ ಆಯುಕ್ತ ಭರತ್ ಹಾಗೂ ತಹಸೀಲ್ದಾರ ಎಸ್.ರವಿಚಂದ್ರ, ಸದರಿ ಭೂಮಿ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪ್ರಭಾರ ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವಕರ್, ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಚಾರಣೆಗೆ ಚಾಲನೆ ನೀಡಿದರು. ಪದೇ ಪದೇ ಎಚ್ಚರಿಕೆ ನೀಡಿದರೂ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ, ತೆರವಿಗಾಗಿ ಇಲಾಖೆ ಸಾವಿರಾರು ರುಪಾಯಿಯನ್ನು ವ್ಯಯಿಸಬೇಕಾಗುತ್ತದೆ. ಇದು ಹೀಗೆಯೇ ಮುಂದುವರೆದರೆ ಅತಿಕ್ರಮಣದಾರರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಾಲಿ ಗ್ರಾಮಲೆಕ್ಕಿಗ ಮನೋಜ್
ಗ್ರಾಮಸಹಾಯಕರು ಆದ ಮಾಸ್ತಯ್ಯ ನಾಯ್ಕ,ವಾಸು ಶೆಟ್ಟಿ
ರೊಹೀದಾಸ ನಾಯ್ಕ,ಉದಯ ನಾಯ್ಕ,
ಮುಂತಾದವರು ಉಪಸ್ಥಿತರಿದ್ದರು.