ಭಟ್ಕಳ ವಿವಿಧ ಕಡೆ ನೀರಿಗಾಗಿ ಹಾಹಾಕಾರ

Source: so news | Published on 5th May 2019, 8:14 PM | Coastal News | Special Report |

ಭಟ್ಕಳ:ಬಿಸಿಲ ಬೇಗೆಗೆ ಧರೆ ಹತ್ತಿ ಉರಿಯುತ್ತಿದೆ. ಕರಾವಳಿಯ ಚಿರಾಪುಂಜಿ ಎಂದೇ ಗುರುತಿಸಲಾಗುವ ಭಟ್ಕಳದಲ್ಲಿ ನೀರಿನ ಸೆಲೆ ಇಲ್ಲದಾಗಿದೆ. ಸುತ್ತ ನೀರಿದ್ದರೂ ಕುಡಿಯುವ ಜೀವಜಲಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ, ಜಾನುವಾರುಗಳನ್ನು ಸಾಕುವುದೇ ಹರಸಾಹಸವಾಗಿದೆ.

ನಗರದ ವಿ.ವಿ. ರಸ್ತೆ, ಮುಟ್ಟಳ್ಳಿ ಬೈಪಾಸ್, ಹೊಂಡದಕೇರಿ, ನೆಹರು ರಸ್ತೆ, ಆಸರಕೇರಿ, ಸೋನಾರಕೇರಿ, ವಿ.ಟಿ. ರಸ್ತೆ, ವಿವಿಧೆಡೆಯ ಬಾವಿಯ ಜಲವೆಲ್ಲ ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮಳೆಯ ಅಭಾವ, ನೀರಿನ ಸಂರಕ್ಷಣೆ ಕುರಿತು ಬೇಜವಾಬ್ದಾರಿ, ಜಲಮಟ್ಟ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗದಿರುವುದು ಸಮಸ್ಯೆಯ ಜಟಿಲತೆಗೆ ಕಾರಣವಾಗಿದೆ. ಇದರಿಂದ ಸ್ಥಳೀಯರು ಬೇಸಿಗೆ ಎಂದರೆ ನರಕಯಾತನೆ ಅನುಭವಿಸುವಂತಾಗಿದೆ. ನೀರಿನ ನಡುವೆಯೇ ಹುಟ್ಟಿ ಬೆಳೆದರೂ ಇಂದು ಪರಿಸ್ಥಿತಿ ಸಂಪೂರ್ಣ ಭಿನ್ನ. ಒಂದೆರಡು ಕೊಡ ನೀರು ಸಂಗ್ರಹಿಸುವುದೂ ಅಸಾಧ್ಯವೆನ್ನಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ನೀರಿಗಾಗಿ ಅಲೆಯುವ ಸ್ಥಿತಿ ಎದುರಾಗಲಿದೆ. ನೀರಿಲ್ಲದೆ ಕೃಷಿ ಕಾರ್ಯಗಳಿಗೆ ತೊಡಕಾದರೆ, ಕಟ್ಟಡ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿದ್ದು, ಕೂಲಿ ಕಾರ್ವಿುಕರಿಗೂ ಇದರ ಪರಿಣಾಮ ತಟ್ಟಲಾರಂಬಿಸಿದೆ.

ಪುರಸಭೆ ವ್ಯಾಪ್ತಿಯ ನೀರು ಕುಡಿಯೋ ಹಾಗಿಲ್ಲ: ಭಟ್ಕಳ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಜನರು ಈ ಹಿಂದೆ ನೀರಿಗಾಗಿ ಬಾವಿ ಅವಲಂಬಿಸಿದ್ದರು. ಆದರೆ, ಪುರಸಭೆಯ ಒಳಚರಂಡಿ ಕಾಮಗಾರಿ ಯಾವಾಗ ಆರಂಭವಾಯಿತೋ ಅಂದಿನಿಂದ ಜನರಿಗೆ ನೀರಿನ ಸಮಸ್ಯೆ ತಲೆದೋರಿದೆ. ಚರಂಡಿ ನೀರು ಬಾವಿಗಳಿಗೆ ಸೇರಿ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ಬಾವಿಯಲ್ಲಿ ನೀರಿದ್ದರೂ ಜನರು ಕುಡಿಯುತ್ತಿಲ್ಲ. ಅಲ್ಲದೆ, ಇತರ ಬಳಕೆಗೂ ಉಪಯೋಗಿಸುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಕುರಿತು ಹಲವು ಬಾರಿ ಪುರಸಭೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಶರಾಬಿ ನದಿ ಸೇರಿ ತಾಲೂಕಿನ ಹಲವು ನದಿಗಳಲ್ಲಿ ಹೂಳು ತುಂಬಿದ್ದು, ಹೂಳೆತ್ತುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಇಲ್ಲವಾದಲ್ಲಿ ಉ.ಕ. ಜಿಲ್ಲೆಯ ಚಿರಾಪುಂಜಿಯಾಗಿರುವ ಭಟ್ಕಳದ ಜನರು ಹನಿ ನೀರಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದರೂ ಆಶ್ಚರ್ಯಪಡಬೇಕಿಲ್ಲ.

ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭಟ್ಕಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೊಷಿಸಲಾಗಿದೆ. ಈಗಾಗಲೇ 10 ಗ್ರಾಪಂ ವ್ಯಾಪ್ತಿಗಳಲ್ಲಿ 15 ಗ್ರಾಮಗಳ ಅಡಿ 58 ಮಜರೆ ಗ್ರಾಮಗಳಿಗೆ ಕುಡಿಯುವ ನೀರನ್ನು ಆದ್ಯತೆ ಮೇರೆಗೆ ಪೂರೈಸಲಾಗುತ್ತಿದೆ. ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದಲ್ಲಿ ತಹಸೀಲ್ದಾರ್ ಕಚೇರಿಯ ದೂ.ಸಂ. 08385-226422 ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. | ಎನ್.ಬಿ. ಪಾಟೀಲ ತಹಸೀಲ್ದಾರ್ ಭಟ್ಕಳ

ಅಂತರ್ಜಲ ಬತ್ತಲು ಏನು ಕಾರಣ?

ಮೊದಲೆಲ್ಲ ಶರಾಬಿ ನದಿಗೆ ಅಲ್ಲಲ್ಲಿ ಪಕ್ಕದ ರೈತರೆಲ್ಲ ಸೇರಿ ಕಟ್ಟೆ ಕಟ್ಟವುದು ವಾಡಿಕೆಯಾಗಿತ್ತು. ಇದರಿಂದ ನೀರು ನಿಲ್ಲುತ್ತಿದ್ದು, ಅಕ್ಕಪಕ್ಕದ ಬಾವಿಗಳಿಗೆ ನೀರಿನ ಸೆಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿತ್ತು. ಹೀಗಾಗಿ, ಸಮಸ್ಯೆ ಇಷ್ಟೊಂದು ಗಂಭೀರ ರೂಪ ಪಡೆಯುತ್ತಿರಲ್ಲಿಲ್ಲ. ಆದರೆ, ಈಗ ಶರಾಬಿ ನದಿ ತುಂಬೆಲ್ಲ ಹೂಳು ತುಂಬಿ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ತಾಲೂಕಾಡಳಿತ, ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕೊಂಕಣ ರೈಲ್ವೆ ಬಂದಾಗಿನಿಂದ ಈ ಭಾಗದ ಜನರಿಗೆ ನೀರಿನ ಬವಣೆ ಎದುರಾಗಿದೆ. ಮಣ್ಣು ತುಂಬಿದ ಜಾಗವನ್ನೆಲ್ಲ ಹಾಗೆಯೇ ಬಿಟ್ಟಿರುವುದು ನೀರಿನ ಸಂಗ್ರಹ ಕಡಿಮೆಯಾಗಲು ಒಂದು ಕಾರಣವಾದರೆ, ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಸೇತುವೆ ತಳವನ್ನು ಬ್ಲಾಕ್ ಮಾಡಿ ನೀರಿನ ಹರಿವನ್ನು ತಡೆದಿರುವುದು ಇನ್ನೊಂದು ಕಾರಣ. ಜನರ ಸಂಕಷ್ಟಕ್ಕೆ ಐಆರ್​ಬಿ ಸಂಸ್ಥೆಯ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಭಟ್ಕಳದಲ್ಲಿ ಸಣ್ಣ ನೀರಾವರಿ ಇಲಾಖೆ ಇದ್ದೂ ಇಲ್ಲದಂತಾಗಿದೆ. ಪ್ರತಿವರ್ಷ ನೀರಿನ ಅನುದಾನವನ್ನು ಮಾತ್ರ ಖರ್ಚು ಮಾಡುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...