ಭಟ್ಕಳ: ತಾಲೂಕಿನಲ್ಲಿ ಮಳೆಗಾಳಿಗೆ ತೆಂಗಿನ ಮರವೊಂದು ಮುರಿದು ಮನೆಯ ಮೇಲೆ ಬಿದ್ದಿರುವ ಘಟನೆ ತಾಲೂಕಿನ ಕೈಕಿಣಿಯಲ್ಲಿ ನಡೆದಿದೆ.
ಹಾನಿಗೊಳಗಾದ ಮನೆಯ ಮಾಲಕರನ್ನು ಕುಪ್ಪ ಶನಿಯಾ ದೇವಡಿಗ ಎಂದು ಗುರುತಿಸಲಾಗಿದೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.
ಕಳೆದ 2-3 ದಿನಗಳಿಂದ ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ರವಿವಾರ ಬೆಳಿಗ್ಗೆ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗಿನ ಅವಧಿಯಲ್ಲಿ 156ಮಿಮಿ. ಮಳೆ ದಾಖಲಾಗಿದೆ.
ಇದರೊಂದಿಗೆ ಈ ವರ್ಷ ಒಟ್ಟೂ ಮಳೆಯ ಪ್ರಮಾಣ 4608ಮಿಮೀ.ಗೆ ಏರಿಕೆ ಕಂಡಿದೆ. ನಿರಂತರ ಮಳೆಯಿಂದಾಗಿ ಹೊಳೆ ಹಳ್ಳಗಳು ಭರ್ತಿಯಾಗಿವೆ.
ಶರಬಿ ಹೊಳೆ ತುಂಬಿ ಹರಿಯುತ್ತಿದ್ದು, ತಟದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಶಿರಾಲಿಯಲ್ಲಿ ಮಳೆಯ ನೀರು ಹೊಳೆಯಾಗಿ ಹೆದ್ದಾರಿಯ ಮೇಲೆ ಹರಿದು ಹೋಗುತ್ತಿದೆ. ತಾಲೂಕಿನ ಬೈಲೂರು, ಮಾವಳ್ಳಿ, ಬೆಂಗ್ರೆ, ಶಿರಾಲಿಯಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.