ಭಟ್ಕಳ: ಭಟ್ಕಳ ಸರಕಾರಿ ಆಸ್ಪತ್ರೆಯನ್ನು ಕೊರೊನಾ ಮುಕ್ತ ಆಸ್ಪತ್ರೆಯನ್ನಾಗಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಲಭ್ಯವಾಗುತ್ತಿದ್ದು ಜನರು ಇದರ ಸದುಪಯೋಗ ಪಡೆಯಬೇಕು ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಹೇಳಿದರು.
ಅವರು ಶುಕ್ರವಾರ ಭಟ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಭಟ್ಕಳದಲ್ಲಿ ಸೋಶಿಯಲ್ ಮೀಡಿಯಾ ಹೆಚ್ಚು ಜನಪ್ರಿಯವಾಗಿದ್ದು ಸುಳ್ಳು ಸುದ್ದಿ ಹರಡುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಜನತೆ ಕೊರೊನಾಕ್ಕೆ ಯಾವುದೇ ರೀತಿಯ ಹೆದರುವ ಅಗತ್ಯವಿಲ್ಲ. ಖಿನ್ನತೆಗೊಳಗಾಗುವ ಅಗತ್ಯವೂ ಇಲ್ಲ, ಕೊರೊನಾ ಸೋಂಕು ಎಲ್ಲಾ ರೀತಿಯಲ್ಲಿ ಗುಣಮುಖವಾಗುವಂತದ್ದು, ಸರಕಾರ, ಜಿಲ್ಲಾಡಳಿತ ನಿಮ್ಮೊಂದಿಗಿದ್ದು ಎಲ್ಲರೂ ಧೈರ್ಯದಿಂದ ಮುಂದಿನ ದಿನಗಳನ್ನು ಎದುರಿಸುವ ಭರವಸೆ ಇದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕೂಡಾ ನಾವು ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಕೊಡಬಹುದು ಎನ್ನುವುದನ್ನು ನಮ್ಮ ಆಸ್ಪತ್ರೆಗಳು ಸಾಬೀತು ಪಡಿಸಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಉತ್ತರ ಕನ್ನಡದಲ್ಲಿ ವೈದ್ಯಕೀಯ ಸೌಲಭ್ಯವಿಲ್ಲ ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ ಕೋವಿಡ್-19 ಬಂದಾಗಿನಿಂದ ನಾವು ನಮ್ಮ ಜಿಲ್ಲೆಯ ಆಸ್ಪತ್ರೆಗಳಲ್ಲಿಯೇ ಅವರಿಗೆ ಚಿಕಿತ್ಸೆ ಕೊಡಿಸಿದ್ದು ಎಲ್ಲರೂ ಗುಣಮುಖರಾಗಿದ್ದಾರೆ. ಚಿಕಿತ್ಸೆಯಲ್ಲಿರುವವರು ಕೂಡಾ ಉತ್ತಮವಾಗಿ ಆರೋಗ್ಯ ಸುಧಾರಣೆಯಾಗಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ. ಭಟ್ಕಳದ ಎಲ್ಲಾ ಕೊರೊನಾ ಸೋಂಕಿತರೂ ಕೂಡಾ ಬಿಡುಗಡೆಯಾಗಿದ್ದು ಐದು ತಿಂಗಳ ಅಪಸ್ಮಾರ ಇರುವ ಮಗುವನ್ನು ಕೂಡಾ ನಮ್ಮ ವೈದ್ಯರು ಗುಣಪಡಿಸಿರುವುದು ಉತ್ತಮ ಕಾರ್ಯವಾಗಿದೆ. ಬೇರೆ ಹೈಟೆಕ್ ಮೆಡಿಕಲ್ ವ್ಯವಸ್ಥೆ ಇರುವಲ್ಲಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾದಿಂದ ಸಾವು ಸಂಭವಿಲ್ಲ ಎನ್ನುವುದು ಸಮಾಧಾನದ ಸಂಗತಿ ಎಂದೂ ಹೇಳಿದರು.
ಜಿಲ್ಲೆಯಲ್ಲಿ ಪತ್ತೆಯಾದ ಶೇ.45ರಷ್ಟು ಸೋಂಕಿತರು ಭಟ್ಕಳದವರೇ ಆಗಿದ್ದುರೂ ಕೂಡಾ ನಮಗೆ ರೋಗದ ಮೂಲ ಪತ್ತೆಯಾಗಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಜೀವ ಮತ್ತು ಜೀವನದ ಪ್ರಶ್ನೆ ಬಂದಾಗ ಜೀವ ಪ್ರಥಮ, ಜೀವನ ನಂತರದ್ದು ಆದರೆ ಇಲ್ಲಿ ಎರಡಕ್ಕೂ ಕೂಡಾ ಪ್ರಾಮುಖ್ಯತೆ ಇದೆ ಎಂದ ಅವರು ಭಟ್ಕಳದಲ್ಲಿ ನಾವು ಪ್ರಾಯೋಗಿಕವಾಗಿ ಹಲವರು ವ್ಯವಸ್ಥೆಗಳನ್ನು ನೀಡಿದ್ದೇವೆ. ಇದಕ್ಕೆ ಜನರ ಸ್ಪಂಧನೆ ಹೇಗಿದೆ ಎಂದು ನೋಡಿ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕಳೆದ 70 ದಿನಗಳಿಂದ ಭಟ್ಕಳದ ಜನತೆ ಬಹಳ ಉತ್ತಮವಾಗಿ ಸ್ಪಂಧಿಸಿದ್ದಾರೆ. ಎಂತಹ ಆತಂಕ ಇದ್ದಾಗಲೂ ಕೂಡಾ ಜನರು ಧೈರ್ಯಗುಂದದೇ ಸಹಕಾರ ನೀಡಿದ್ದಕ್ಕಾಗಿ ಜನತೆಗೆ ಧನ್ಯವಾದ ಹೇಳಿದ ಅವರು ಮುಂದಿನ ದಿನಗಳಲ್ಲಿ ಹೇಗೆ ಸಡಿಲಿಕೆ ಮಾಡಬೇಕು ಎನ್ನುವುದು ಇಲ್ಲಿನ ಜನರ ಮೇಲೆ ಅವಲಂಬಿಸಿದೆ. ಜನರು ಇದೇ ರೀತಿಯ ಸಹಕಾರ ನೀಡಿದರೆ ಮಾತ್ರ ಜಿಲ್ಲಾಡಳಿತ ಸಡಿಲಿಕೆಯನ್ನು ಘೋಷಿಸಬಹುದು ಎಂದರು.
ಯಾರೇ ಆದರು ತಮ್ಮ ಅಕ್ಕಪಕ್ಕದ ಮನೆಗಳಿಗೆ ಹೊರಗಿನಿಂದ ಯಾರೇ ಬಂದರೂ ಕೂಡಾ ತಕ್ಷಣ ಮಾಹಿತಿ ನೀಡಬೇಕು, ಇದು ಸಾಮಾಜಿಕ ಜವಾಬ್ದಾರಿಯಾಗಿದೆಯಲ್ಲದೇ ನಿಮಗೂ ಕೂಡಾ ಅನುಕೂಲವಾಗುವುದು. ನಿಮ್ಮ ಎರಿಯಾದಲ್ಲಿ ಯಾರೇ ಬಂದರೂ ಕೂಡಾ ಅವರ ಮನೆಗೇ ಬಂದು ಅವರನ್ನ ಪರೀಕ್ಷಿಸಲಾಗುವುದು. ಕಾರಣ ಯಾರೂ ಕೂಡಾ ಮಾಹಿತಿ ಕೊಡಲು ಭಯಪಡುವ ಅಗತ್ಯವಿಲ್ಲ ಎಂದರು.
ಜಿಲ್ಲೆಗೆ ಬರುವವರನ್ನು ಹೋಗುವವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಜನರೇ ಸ್ವಯಂ ನಿಯಂತ್ರಣವನ್ನು ಹೇರಿಕೊಳ್ಳಬೇಕು ಅಲ್ಲದೇ ಸ್ವಯಂ ಆಗಿ ಮುಂದೆ ಬಂದು ಪರೀಕ್ಷೆಗೊಳಪಡಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳು ಕಾರ್ಯಾರಂಭ ಮಾಡಲಿವೆ. ಮಳೆಗಾಲ ಸಮೀಪಿಸುವುದರಿಂದ ಜ್ವತ ಇತ್ಯಾದಿಗಳು ಹೆಚ್ಚಾಗುವ ಸಂಭವವಿದೆ. ಆದರೆ ಎಲ್ಲಾ ಜ್ವರವು ಕೂಡಾ ಕೋವಿಡ್-19 ಎನ್ನವುದು ತಪ್ಪಾಗುತ್ತದೆ. ಆದರೆ ಜನರು ಯಾವುದನ್ನೂ ಮುಚ್ಚಿಡಬಾರದು. ಅದಕ್ಕಾಗಿ ಎಲ್ಲಾ ಮೆಡಿಕಲ್ ಸ್ಟೋರ್ಸ್, ಆಸ್ಪತೆಗಳ ಮೇಲೆ ನಿಗಾವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಭರತ್ ಎಸ್., ಎ.ಎಸ್.ಪಿ. ನಿಖಿಲ್ ಬಿ., ತಹಸೀಲ್ದಾರ್ ರವಿಚಂದ್ರ, ತಾ.ಪಂ. ಕಾ.ನಿ.ಅಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭಾ ಮುಖ್ಯಾಧಿಕಾರಿ ದೇವರಾಜ್, ಜಾಲಿ ಪ.ಪಂ. ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಮುಂತಾದವರಿದ್ದರು.