ಭಟ್ಕಳ : ಕೋವಿಡ್ ಲಾಕ್ ಡೌನಿಂದ ಬಟ್ಟೆ ವ್ಯಾಪಾರಿಗಳು ತುಂಬಾ ನಷ್ಟ ಅನುಭವಿಸಿದ್ದು ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕೆಂದು ಭಟ್ಕಳದ ಗಾರ್ಮೆಂಟ್ ಮರ್ಚಂಟ್ ಅಸೋಸಿಯೇಷನ್ ಉಪವಿಭಾಗಾಧಿಕಾರಿ ಮಮತಾದೇವಿ ಅವರಿಗೆ ಮನವಿ ನೀಡಿ ಆಗ್ರಹಿಸಿದೆ.
ಕಳೆದ ಕೆಲ ತಿಂಗಳಿಂದ ಲಾಕ್ ಡೌನ್ ಸಂಕಷ್ಟದಿಂದ ಅಂಗಡಿಯ ಬಾಡಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಾಲ ಕಟ್ಟಲಿಕ್ಕೆ ಕೂಡ ತೊಂದರೆಯಾಗಿದೆ. ಬ್ಯಾಂಕುಗಳಿಗೆ ಸಾಲದ ಇಎಂಐ ತುಂಬಲಿಕ್ಕೆ ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಂಜಾನ್ ಸಂದರ್ಭದಲ್ಲಿ ಭಟ್ಕಳದಲ್ಲಿ ತಮಗೆ ಉತ್ತಮ ವ್ಯಾಪಾರ ಅಗುತಿತ್ತು. ಆದರೆ ಕರೋನಾ ರಂಜಾನ್ ವ್ಯಾಪಾರವನ್ನ ಕಸಿದಿರುವುದರಿಂದ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಸಂಬಳ ನೀಡಲು ಸಾಧ್ಯವಾಗಿಲ್ಲ. ಅಲ್ಲದೇ ಅಂಗಡಿಗಳಿಗೆ ಈ ಹಿಂದೆ ವ್ಯಾಪಾರಕ್ಕಾಗಿ ಬಟ್ಟೆ ಖರೀದಿಸಲಾಗಿದ್ದು, ಅವರಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದಿಂದ ನಮಗೆ ಸಹಾಯ ಬೇಕು ಎಂದು ವ್ಯಾಪಾರಸ್ಥರು ಯಾಚಿಸಿದ್ದಾರೆ.