ಭಟ್ಕಳ: 8 ತಿಂಗಳ ಸುದೀರ್ಘ ಕೊರೊನಾ ತಡೆ ಲಾಕ್ಡೌನ್ ನಂತರ ಸರಕಾರ ಮಂಗಳವಾರದಿಂದ ಪದವಿ ಕಾಲೇಜು ( ಅಂತಿಮ ವರ್ಷ) ಆರಂಭವಾಗಿದ್ದು, ತಾಲೂಕಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಕಾಲಿಡದೇ ದೂರವೇ ಉಳಿದರು.
ಕೆಲವು ಕಾಲೂಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಕಾದು ಕುಳಿತರಾದರೂ, ಅಲ್ಲೊಬ್ಬ, ಇಲ್ಲೊಬ್ಬ ವಿದ್ಯಾರ್ಥಿಗಳು ಕಾಲೇಜಿನ ಬಳಿ ಸುಳಿದು ಮಾಯವಾದರು. ತಾಲೂಕಿನ ವಿವಿಧ ಪದವಿ ಕಾಲೇಜುಗಳ ಪೈಕಿ ಭಟ್ಕಳ ಸಿದ್ಧಾರ್ಥ ಪದವಿ ಕಾಲೇಜಿಗೆ ಮಂಗಳವಾರ 75 ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇನ್ನುಳಿದಂತೆ ಮುರುಡೇಶ್ವರ ಆರ್ಎನ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50% ದಾಟಿಲ್ಲ. ಭಟ್ಕಳ ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬಂದು ವಾಪಸ್ಸಾಗಿದ್ದಾರೆ. ಅಂಜುಮನ್ ಪದವಿ ಕಾಲೇಜು ಹಾಗೂ ಭಟ್ಕಳ ಸರಕಾರಿ ಪದವಿ ಕಾಲೇಜಿನ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
ಸರಕಾರದ ಸೂಚನೆಯಂತೆ ಮಂಗಳವಾರದಿಂದ ಪದವಿ ಅಂತಿಮ ವರ್ಷದ ತರಗತಿಗಳು ಆರಂಭವಾಗಿವೆ. ಕೊರೊನಾ ತಡೆ ಮಾರ್ಗ ಸೂಚಿ ಪಾಲನೆಯೊಂದಿಗೆ, ಕೋವಿಡ್19 ಪರೀಕ್ಷೆ, ಸೆನಿಟೈಸೇಶನ್ ಇತ್ಯಾದಿ ಎಲ್ಲ ಸಿದ್ಧತೆಗಳನ್ನು ಖಾತರಿಪಡಿಸಿಕೊಳ್ಳುವಂತೆ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತಂಕಪಡಬೇಕಾಗಿಲ್ಲ - ಎಸ್.ರವಿಚಂದ್ರ, ತಹಸೀಲ್ದಾರರು, ಭಟ್ಕಳ |
ಉಪನ್ಯಾಸಕರಿಗೆ ಕೋವಿಡ್-19 ಪರೀಕ್ಷೆ:
ಕಾಲೇಜು ಆರಂಭದ ಮೊದಲ ದಿನ ಉಪನ್ಯಾಸಕರು, ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯ ವತಿಯಿಂದ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳು, ಪಾಲಕರು ಒಪ್ಪಿಗೆ ಸೂಚಿಸಿದರೆ ವಿದ್ಯಾರ್ಥಿಗಳಿಗೂ ಕಾಲೇಜಿನಲ್ಲಿಯೇ ಕೋವಿಡ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್ 19 ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ತಮಗೆ ಕೊರೊನಾ ಪಾಸಿಟಿವ್ ಬಂದರೆ ಏನು ಮಾಡುವುದು ಎಂಬ ಆತಂಕದಲ್ಲಿದ್ದು, ವಿದ್ಯಾರ್ಥಿಗಳ ಭಯವನ್ನು ದೂರವಾಗಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಎಲ್ಲ ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಗಾಗುವುದು ಉತ್ತಮ, ಪಾಸಿಟಿವ್ ಬಂದರೂ ಯಾರೂ ಧೃತಿ ಗೆಡುವುದು ಬೇಡ, ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ದೃಷ್ಟಿಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಹಕರಿಸುವಂತೆ ಕಾಲೇಜು ಆಡಳಿತ ಮಂಡಳಿಗಳು ವಿನಂತಿಸಿಕೊಂಡಿವೆ.