ನಾನು ಬ್ರಾಹ್ಮಣರನ್ನು ಕಂಡು ಸಂಸ್ಕಾರವನ್ನು ಬೆಳೆಸಿಕೊಂಡೆ ಆದರೆ ಈ ಬ್ರಾಹ್ಮಣನಿಗೆ ಸಂಸ್ಕಾರವೇ ಇಲ್ಲ-ಆರ್.ಎನ್.ನಾಯ್ಕ ಮಾಜಿ ಸಚಿವ
ಭಟ್ಕಳ: ಅಕ್ಕಪಕ್ಕ ವಾಸಿಸುತ್ತಿರುವ ಬ್ರಾಹ್ಮಣ ಕುಟುಂಬವನ್ನು ನೋಡಿ ಸಂಸ್ಕಾರವನ್ನು ನಾನು ಬೆಳೆಸಿಕೊಂಡಿದ್ದರೆ ನಮ್ಮ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಮಂತ್ರಿ ಅನಂತ್ ಕುಮಾರ್ ಹೆಗಡೆ ಹುಟ್ಟು ಬ್ರಾಹ್ಮಣನಾದರೂ ಸಂಸ್ಕಾರವನ್ನು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಮುಖಂಡ ಹಾಗೂ ಮಾಜಿ ಸಚಿವ ಆರ್.ಎನ್.ನಾಯ್ಕ ಆರೋಪಿಸಿದ್ದಾರೆ.
ಅವರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮನುವಾದಕ್ಕೆ ಜೋತುಬಿದ್ದಿರುವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವ ಮಾತನಾಡಿ, ಈ ದೇಶದ ಅಸಂಖ್ಯ ಹಿಂದೂ,ಮುಸ್ಲಿಮ,ಕ್ರೈಸ್ತ ಹಾಗೂ ದಲಿತರನ್ನು ಮನುವಾದಿಗಳನ್ನಾಗಿ ಮಾಡಲು ಬಯಸುತ್ತಿದ್ದಾರೆ. ಮನುಸ್ಮೃತಿಯಲ್ಲಿ ಹಿಂದೂ ವಿರೋಧಿ, ಮಹಿಳಾ ವಿರೋಧಿ, ಮನುಷ್ಯ ವಿರೋಧಿ ಸೂಕ್ತಕಗಳನ್ನು ಆಧಾರ ಸಹಿತವಾಗಿ ಪತ್ರಕರ್ತರ ಮುಂದಿಟ್ಟ ಅವರು ಇಂತಹ ಹಿಂದೂತ್ವ ನಮಗೆ ಬೇಕಾ? ಎಂದು ಪ್ರಶ್ನಿಸಿದರು. ಮನುಸ್ಮೃತಿಯೊಂದು ಅಪ್ಪಟ ಸುಳ್ಳು, ವೈಜ್ಞಾನಿಕ ಆಧಾರವಿಲ್ಲದ್ದು, ಇದು ಕೇವಲ ಬ್ರಹ್ಮಣರ ಉದ್ಧಾರಕ್ಕಾಗಿ ಬರೆಯಲಾಗಿದೆಯೇ ಹೊರತು ಇತರ ಸಮುದಾಯಗಳನ್ನು ತನ್ನ ಕಾಲಾಳಾಗಿ ಕಾಣುತ್ತದೆ. ನ್ಯಾಯಾದಾನ ಮಾಡುವ ಹಕ್ಕು ಕೇವಲ ಬ್ರಾಹ್ಮಣಿಗೆ ಮಾತ್ರ ನೀಡಿದ ಮನುಸ್ಮೃತಿ ಶೂದ್ರನಾದವನು ಎಷ್ಟೆ ತಿಳುವಳಿಕೆ ಇದ್ದರೂ ನ್ಯಾಯಾಧೀಶನ ಹುದ್ದೆಗೆ ಆರ್ಹನಲ್ಲ ಎಂದು ಹೇಳುತ್ತದೆ. ಆದ್ದರಿಂದಲೇ ಶೇ.5%ರಷ್ಟಿರುವ ಬ್ರಾಹ್ಮಣರು ಶೇ.78% ನ್ಯಾಯಾಂಗದ ಉನ್ನತ ಹುದ್ದೆಯಲ್ಲಿದ್ದಾರೆ. ಕಳೆದ 6 ವರ್ಷದಿಂದ ಒಬ್ಬನೇ ಒಬ್ಬ ದಲಿತ ನ್ಯಾಯಾಧೀಶನನ್ನು ಸುಪ್ರೀಮ್ ಕೋರ್ಟ ಗೆ ಉನ್ನತಿಕರಿಸಿಲ್ಲ. ಮನುವಾದಿ ಅನಂತ್ ಹೆಗಡೆ ಇಂತಹ ಪರಿಸ್ಥಿತಿಯನ್ನು ದೇಶದಲ್ಲಿ ನಿರ್ಮಾಣ ಮಾಡಬಯಸುತ್ತಿದ್ದಾರೆ ಎಂದು ಆರೋಪಿಸಿದರು.
ತ್ರೀವಳಿ ತಲಾಖ್ ಸೇರಿದಂತೆ ಮುಸ್ಲಿಮರ ಆಚರಣೆಗೆ ವಿರೋಧಿಸುವ ಮನುವಾದಿಗಳು ಹಿಂದೂ ಧರ್ಮದಲ್ಲಿನ ಕಳಂಕವನ್ನು ತೊಲಗಿಸಲು ಏನು ಮಾಡಿದ್ದಾರೆ. ಮನುವಾದಿ ಅನಂತ್ ಕುಮಾರ್ ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಹೇಳುತ್ತ, ಇಂತಹ ಅನಾಗರಿಕ, ಮನುಷ್ಯ ವಿರೋಧಿ, ಮಹಿಳಾ ವಿರೋಧಿ ಮನುಸ್ಮೃತಿ ಆಧಾರಿತ ಸಂವಿಧಾನ ಹೇರಲು ಹೊರಟಿರುವುದು ಯಾವ ನ್ಯಾಯಾ? ಎಂದು ಪ್ರಶ್ನಿಸುತ್ತಾರೆ.
ಈ ಸಂದರ್ಭದಲ್ಲಿ ಟಿ.ಡಿ.ನಾಯ್ಕ, ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.