ಭಟ್ಕಳದಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಭಟ್ಕಳ : ತಾಲೂಕಿನಾದ್ಯಂತ ಬುಧವಾರ ಇಸ್ಲಾಮ್ ಧರ್ಮೀಯರು ಸಡಗರ ಸಂಭ್ರಮದೊಂದಿಗೆ ಈದ್ ಉಲ್ ಫಿತ್ರ್ನ್ನು ಆಚರಿಸಿದರು.
ಬುಧವಾರ ಮುಂಜಾನೆ 7.30 ಗಂಟೆಗೆ ವಿವಿಧ ಜಾಮೀಯಾ ಮಸೀದಿಗಳಿಂದ ಸಾವಿರಾರು ಶ್ವೇತವಸ್ತ್ರಧಾರಿ ಮುಸ್ಲೀಮ್ ಧರ್ಮೀಯರು ದಿ ನ್ಯೂ ಇಂಗ್ಲೀಷ್ ಪಕ್ಕದ ಈದಗಾ ಮೈದಾನದವರೆಗೆ ಮೆರವಣಿಗೆಯಲ್ಲಿ ಸಾಗಿ, 8 ಗಂಟೆಗೆ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಇಸ್ಲಾಮ್ ಧರ್ಮಗುರು ಮೌಲಾನಾ ಅಬ್ದುಲ್ ಆಲೀಮ್ ಖತೀಜ್ ನದ್ವಿ, ಹಬ್ಬವು ದೇವರು ನೀಡಿರುವ ಉಡುಗೊರೆಯಾಗಿದೆ. ರಮಜಾನ್ ಮಾಸದ ಪಾವಿತ್ರ್ಯವನ್ನು ಉಳಿದ 11 ತಿಂಗಳ ಕಾಲ ವಿಸ್ತರಿಸಿಕೊಳ್ಳಬೇಕು. ಭಟ್ಕಳದಲ್ಲಿ ಇಸ್ಲಾಮ್ ಧರ್ಮೀಯರು ಸುತ್ತಮುತ್ತಲಿನ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಶಾಂತಿ ಸೌಹಾರ್ದತೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮೌಲಾನಾ ಇಕ್ಬಾಲ್ ನದ್ವಿ, ಮೌಲಾನಾ ಖಾಜಾ ಅಕ್ರೆಮಿ ಮದನಿ ಉಪಸ್ಥಿತರಿದ್ದರು. ನಂತರ ಮೈದಾನದಿಂದ ಹೊರ ಬಂದ ಜನರು ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳು ಹಿರಿಯರಿಂದ ಹಣದ ಉಡುಗೊರೆಯನ್ನು ಪಡೆದುಕೊಂಡು ಸಂತಸಪಟ್ಟರು. ಭಟ್ಕಳದ ಮುಸ್ಲೀಮರ ವಿಶೇಷ ಖಾದ್ಯಗಳಾದ ಶೇವಿಗೆಯ ಶಿರಕುರ್ಮಾ, ಅಕ್ಕಿಯಿಂದ ತಯಾರಿಸಲಾಗುವ ಸಕ್ಕರ್ಮಂಜಿ, ಮೊಟ್ಟೆ ಮತ್ತು ಹಾಲಿನ ಕುಬುಸಾ ಪೋಲಿ, ವಿಶೇಷ ಬಿರ್ಯಾನಿ ಇತ್ಯಾದಿಗಳ ಸವಿಯನ್ನು ಹಬ್ಬದ ಅಂಗವಾಗಿ ಉಣ ಬಡಿಸಲಾಯಿತು. ಮಜ್ಲಿಸೇ ಇಸ್ಲಾ ವ ತಂಜೀಮ್ ವತಿಯಿಂದ ಇಲ್ಲಿನ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಜೈಲಾನಿ ಶಾಬಂದ್ರಿ, ಜಾಫರ್, ಸಾದೀಕ್ ಅಸರ್ಮಟ್ಟಾ, ಡಾ.ಸವಿತಾ ಕಾಮತ್, ಡಾ.ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.
ಬೀಕೋ ಎಂದ ರಮಾಜಾನ್ ಪೇಟೆ: ಮಂಗಳವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಭಟ್ಕಳ ರಮಜಾನ್ ಪೇಟೆ ಬುಧವಾರ ಬಹುತೇಕ ತನ್ನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಕಳಾಹೀನವಾಯಿತು. ವ್ಯಾಪಾರಿಗಳು ಸರಕುಗಳನ್ನು ತುಂಬಿಸಿಕೊಂಡು ಭಟ್ಕಳದಿಂದ ತೆರಳಲು ಅನುವಾಗಿರುವುದು ಕಂಡು ಬಂತು. ಮಂಗಳವಾರ ರಾತ್ರಿ ಜನರು ಪೇಟೆಯಲ್ಲಿ ಕಿಕ್ಕಿರಿದು ಸೇರಿದ್ದರು. ಕಿಡಿಗೇಡಿಯೋರ್ವ ಗೆಳೆಯರೊಂದಿಗೆ ಪೇಟೆಯಲ್ಲಿ ಸುತ್ತಾಡುತ್ತ ಯುವತಿಯರು ಹಾಗೂ ಮಹಿಳೆಯರಿಗೆ ಕಿರಿಕಿರಿ ನೀಡುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಸಾರ್ವಜನಿಕರು ಆತನೊಂದಿಗೆ ಇದ್ದ ಓರ್ವನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆಯಿತು. ಉಳಿದವರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು. ತಾಲೂಕಿನಾದ್ಯಂತ ಡಿವಾಯ್ಎಸ್ಪಿ ವೆಲೈಂಟೈನ್ ಡಿಸೋಜಾ, ಸಿಪಿಐ ಗಣೇಶ ನೇತೃತ್ವದಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.