ಕಡವಿನಕಟ್ಟೆ ಡ್ಯಾಂ ಹೂಳೆತ್ತುವ ಕಾರ್ಯ ಆರಂಭ
ಭಟ್ಕಳ: ಕಡವಿನಕಟ್ಟೆ ಡ್ಯಾಂ ಸೈಟಿನಲ್ಲಿ ನೀರು ಸಂಪೂರ್ಣ ಒಣಗಿದ್ದು ಪುರಸಭೆಯವರು ಇದ್ದ ನೀರನ್ನೇ ಅಲ್ಪಸ್ವಲ್ಪ ಬಳಸುತ್ತಿದ್ದುದನ್ನು ಅರಿತ ಶಾಸಕ ಐದು ದಿನಗಳ ಹಿಂದೆ ಕಡವಿನಕಟ್ಟೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹೂಳೆತ್ತುವ ಕಾರ್ಯ ಕೈಗೊಳ್ಳುವಂತೆ ತಿಳಿಸಿದ್ದು ಯಾವುದೇ ಅಧಿಕಾರಿಗಳು ಗಮನ ಹರಿಸಿಲ್ಲವಾದ್ದರಿಂದ ಸ್ವತಹ ಶಾಸಕ ಸುನೀಲ್ ನಾಯ್ಕ ಹಿಟಾಚಿಯೊಂದಿಗೆ ಆಗಮಿಸಿ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ.
ಶಾಸಕರೂ ಹೊಸಬರಾದ್ದರಿಂದ ನೆಲ ಸಮತಟ್ಟು ಮಾಡಿಕೊಂಡು ಡ್ಯಾಂ ಸೈಟಿಗೆ ಇಳಿಯಲಿಕ್ಕೆ ಮಧ್ಯಾಹ್ನ ತನಕವಾಗಿದ್ದು ನಂತರ ಕೂಡಾ ಟಿಪ್ಪರ್ ಲಾರಿಗಳ ಕೊರತೆಯಿಂದ ಹೂಳು ಮೇಲೆತ್ತುವುದು ಕಷ್ಟಕರವಾಯಿತು. ಸುಮಾರು 200 ರಿಂದ 300 ಲೋಡ್ಗಳಷ್ಟು ಹೂಳು ತುಂಬಿದ್ದು ಡ್ಯಾಂ ಸೈಟಿನಲ್ಲಿ ನೀರು ತುಂಬಲು ಜಾಗವೇ ಇಲ್ಲದಂತಾಗಿದೆ. ಕನಿಷ್ಠ ಮೂರು ಹಿಟಾಚಿ ಯಂತ್ರಗಳು, 10-15 ಟಿಪ್ಪರ್ ಲಾರಿಗಳು ಕೆಲಸ ಮಾಡಿದಲ್ಲಿ ಮಾತ್ರ ಹೂಳು ಸಂಪೂರ್ಣ ತೆಗೆಯಲು ಸಾಧ್ಯವಾಗುವುದು. ಹೆಚ್ಚು ಮುತುವರ್ಜಿ ವಹಿಸಿ ಮಳೆಗಾಲ
ಆರಂಭವಾಗುವುದರೊಳಗಾಗಿ ಹೂಳು ತೆಗೆದರೆ ಮುಂದಿನ ವರ್ಷವಾದರೂ ನೀರಿನ ಬವಣೆ ತಪ್ಪೀತು. ಇನ್ನೇನು ವಾರದೊಳಗೆ ಮಳೆಯಾಗುವ ಲಕ್ಷಣ ಇದ್ದು ಘಟ್ಟದ ಮೇಲೆ ಮಳೆಯಾದರೂ ಭೀಮಾ ನದಿಯಲ್ಲಿ ನೀರು ಹರಿದು ಬರುವುದರಿಂದ ಮತ್ತೆ ಕೆಲಸ ಮಾಡಲು ಸಾಧ್ಯವಾಗದು. ಈಗಾಗಲೇ ತೆಗೆದು ಮೇಲೆ ಹಾಕಿದ್ದ ಮಣ್ಣೂ ಕೂಡಾ ಮತ್ತೆ ಡ್ಯಾಂ ಸೈಟ್ ಒಳಗಡೆಯೇ ತುಂಬಿಕೊಂಡು ಮಾಡಿದ ಕೆಲಸ ವ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಹೂಳೆತ್ತುವ ಕಾರ್ಯ ಮಾಡುವುದಿದ್ದಲ್ಲಿ ಕೇವಲ ಒಂದು ವಾರದೊಳಗೆ ಮಾಡಿ ಮುಗಿಸಬೇಕಾಗಿದ್ದು ಯಂತ್ರೋಪಕರಣಗಳ ಲಭ್ಯತೆ ನೋಡಿಕೊಳ್ಳಬೇಕಾಗಿದೆ.