ಭಟ್ಕಳ: ರೈಲ್ವೆ ಟಿಕೆಟ್ ಪರಿಶೀಲನಾ ಅಧಿಕಾರಿ ಅಸಭ್ಯ ವರ್ತನೆ ತೋರಿದ್ದಾರೆಂದು ಆರೋಪ-ಭಟ್ಕಳ ರೈಲ್ವೆ ಪೊಲೀಸರಿಗೆ ಟಿ.ಸಿ.ವಿರುದ್ದ ದೂರು
ಭಟ್ಕಳ, ಅ ೨೧: ಎರ್ನಾಕುಲಂನಿಂದ ನಿಜಾಮುದ್ದೀನ್ ಮಾರ್ಗವಾಗಿ ತೆರಳುತ್ತಿದ್ದ ಮಂಗಳಾ ಎಕ್ಸಪ್ರೆಸ್ ರೈಲ್ವೆಯಲ್ಲಿ ಮಂಗಳುರಿನಿಂದ ಭಟ್ಕಳಕ್ಕೆ ಪ್ರಯಾಣಿಸುತ್ತಿದ್ದ ಭಟ್ಕಳದ ಮುಸ್ಲಿಂ ಕುಟುಂಬದ ಮಹಿಳೆಯೊಬ್ಬಳ ಜೊತೆ ರೈಲ್ವೆ ಟಿಕೆಟ್ ಪರಿಶೀಲನಾ ಅಧಿಕಾರಿ ಅಸಭ್ಯ ವರ್ತನೆ ತೋರಿದ್ದಾರೆಂದು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಟ್ಕಳ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾವೇ ನಡೆದು ಹೋಗಿದೆ. ಅಷ್ಟಕ್ಕೂ ನಿಲ್ದಾಣದಲ್ಲಿ ನಡೆದಿರುವ ಘಟನೆಯ ವಿವರಗಳು ಇಂತಿವೆ:
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅಸಭ್ಯ ವರ್ತನೆಯು ಎಥೇಚ್ಚವಾಗಿ ನಡೆಯುತ್ತಿದ್ದು, ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿ ವರ್ತನೆ ನಡೆದಿರುವುದು ಸವೇಸಾಮಾನ್ಯವಾಗಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ಭಟ್ಕಳ ತಾಲೂಕಿನ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರದಂದು ತಡರಾತ್ರಿ ನಡೆದಿದೆ. ಎರ್ನಾಕುಲಂನಿಂದ ನಿಜಾಮುದ್ದೀನ್ ಮಾರ್ಗವಾಗಿ ತೆರಳುತ್ತಿದ್ದ 12617 ನಂ. ನ ಮಂಗಳಾ ಎಕ್ಸಪ್ರೆಸ್ ರೈಲ್ವೆಯಲ್ಲಿ ಪ್ರಯಾಣಿಕರ ಟಿಕೆಟ್ ಪರಿಶೀಲನಾ ಅಧಿಕಾರಿಯೋರ್ವ ಮಹಿಳೆಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಮಂಗಳವಾರ ರಾತ್ರಿ ಭಟ್ಕಳದ ಮುಜೀದ್ ಇಕ್ಕೇರಿಯ ಕುಟುಂಬವೂ ಮಂಗಳೂರಿನಿಂದ ಭಟ್ಕಳಕ್ಕೆ ಬರಲು ಮಂಗಳಾ ಎಕ್ಸಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಟಿಕೆಟ್ ಪಡೆದಿತ್ತು. ವೈದ್ಯಕೀಯ ತಪಾಸಣೆಗೆಂದು ತೆರಳಿದ ಈ ಕುಟುಂಬಕ್ಕೆ ಜನರಲ್ ಬೋಗಿಯಲ್ಲಿ ನಿಲ್ಲಲು ಸ್ಥಳವಿರದೆ ಇರುವದರಿಂದ ರಿಸರ್ವೇಸನ್ ಬೋಗಿಯಲ್ಲಿ ಬಂದಿದ್ದಾರೆ. ಅಲ್ಲಿ ತಪಾಸಣೆ ನಡೆಸಿದ ಟಿ.ಸಿ ಇಲ್ಲಿಂದ ತಮ್ಮ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ತಾವು ದಂಡವನ್ನು ತುಂಬಲೂ ಸಿದ್ದರಿದ್ದು ಅಸ್ವಸ್ಥ ಮಹಿಳೆಯೂ ಪ್ರಯಾಣಿಸುತ್ತಿರುವದರಿಂದ ಇಲ್ಲಿಯೆ ಕೂರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಮಾತಿನ ಚಕಮಕಿ ಮುಂದುವರೆದು ಟಿ.ಸಿ ಇವರನ್ನು ತಳ್ಳಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಉಡುಪಿಯ ರೈಲ್ವೆ ಠಾಣೆಯಲ್ಲಿ ದೂರು ದಾಖಲಿಸಿದರು ಸರಿಯಾಗಿ ಸ್ಪಂದಿಸಿಲ್ಲ ಎಂದು ಭಟ್ಕಳದ ತಮ್ಮ ಜನರಿಗೆ ವಿಷಯ ತಿಳಿಸಿದ್ದಾರೆ. ರೈಲು ಭಟ್ಕಳಕ್ಕೆ ಬರುವ ಮುನ್ನವೆ ನೂರಾರು ಸಂಖ್ಯೆಯ ಜನರು ಜಮಾಯಿಸಿ ಟಿ.ಸಿ. ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರತಿಬಟನೆ ನಡೆಸಿದ್ದಾರೆ. ಆದರೆ ಇದ್ಯಾವುದಕ್ಕೂ ಬೆಲೆ ಕೊಡದೇ ಕೆಲವು ಬಿಸಿರಕ್ತದ ಯುವಕರು ಮೂರು ಸಲ ರೈಲನ್ನು ತಡೆಹಿಡಿಯವುದರ ಜೊತೆಗೆ ರೈಲಿನ ಸರಪಳಿಯನ್ನು ಎಳೆದರು. ಸ್ಥಳಕ್ಕೆ ಸಿ.ಪಿ.ಐ ಸುರೇಶಕುಮಾರ ತೆರಳಿ ಪ್ರತಿಬಟನಾಕಾರರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ನಂತರ ಭಟ್ಕಳ ರೈಲ್ವೆ ಪೊಲೀಸರಿಗೆ ಟಿ.ಸಿ.ವಿರುದ್ದ ದೂರು ನೀಡಿದ್ದಾರೆ. ಇದೆಲ್ಲವೂ ನಡೆಯುವಷ್ಟರಲ್ಲಿ ಸುಮಾರು 45ನಿಮಿಷ ರೈಲು ವಿಳಂಬವಾಗಿ ಸಂಚರಿಸುವಂತಾಯಿತು. ಒಂದು ಕಡೆ ಇಷ್ಟೆಲ್ಲಾ ಹೈಡ್ರಾಮಾ ನಡೆಯುತ್ತಿದ್ದರೆ ಅತ್ತ ಕಡೆ ರೈಲಿನಲ್ಲಿದ್ದ ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆಯಾಗಿರುವುದು ಕಂಡು ಬಂತು.
ಈ ಬಗ್ಗೆ ಟಿ.ಸಿ. ಉಡುಪಿ ರೈಲ್ವೆ ಪೋಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.