ಭಟ್ಕಳ : ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರು ಲಾಕ್ ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿದ್ದು, ಮಾನವೀಯ ನೆಲೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಭಟ್ಕಳ ವ್ಯಾಪಾರಿ ಸಮುದಾಯದವರು ವಿನಂತಿಸಿದ್ದಾರೆ.
ಸೋಮವಾರ ಭಟ್ಕಳ ಸಹಾಯಕ ಆಯುಕ್ತ ಭರತ್ ಅವರನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕಳೆದ ಬುಧವಾರ ಸಹಾಯಕ ಆಯುಕ್ತರು ಪಟ್ಟಣದ ಅಂಗಡಿಗಳಿಗೆ ದಿಡೀರ್ ಭೇಟಿ ನೀಡಿ ಟ್ರೇಡ್ ಲೈಸೆನ್ಸ್ ಪರಿಶೀಲಿಸಿದ್ದರು. ಈ ಬಗ್ಗೆ ಭಟ್ಕಳ ಮರ್ಚಂಟ್ ಅಸೋಸಿಯೇಶನ್ ಕೂಡ ಚರ್ಚೆ ನಡೆಸಿದಾಗ ಇನ್ನೂ ಮೂರು ವಾರದೊಳಗೆ ಲೈಸೆನ್ಸ್ ನವೀಕರಣಗೊಳಿಸಲು ಅವಕಾಶ ನೀಡೋದಾಗಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಇಂದು ಸಹಾಯಕ ಆಯುಕ್ತರನ್ನ ಭೇಟಿ ಮಾಡಿ ತಮ್ಮ ಸಮಸ್ಯೆಯನ್ನ ಹೇಳಿಕೊಂಡರು. ಈಗಾಗಲೆ ತಾವು ಹಲವು ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದೇವೆ. ಲಾಕ್ ಡೌನಿಂದಾಗಿ ತುಂಬಾ ನಷ್ಟ ಅನುಭವಿಸಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ವಿನಂತಿಸಿದ್ದಾರೆ. ಈ ವೇಳೆ ಮಾತನಾಡಿದ ಮುಖಂಡರಾದ ಸನಾವುಲ್ಲಾ ಗವಾಯಿ, ಲ ಲಾಕ್ ಡೌನ್ ವೇಳೆಯಲ್ಲಿ ಪುರಸಭೆಯಲ್ಲಿ ಸಿಬ್ಬಂದಿಗಳಿಲ್ಲದೇ ಕೆಲಸಗಳಾಗಿಲ್ಲ ಎಂದು ದೂರಿದರು. ವ್ಯಾಪಾರ ಪರವಾನಿಗೆಗಳನ್ನ ನವೀಕರಿಸಲು ಮತ್ತು ಹೊಸ ಪರವಾನಿಗೆಗಳನ್ನ ಪಡೆಯುವ ಸಲುವಾಗಿ ಪುರಸಭೆ ಕಟ್ಟಡದಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವಂತೆ ಹೇಳಿದರು.
ಭಟ್ಕಳ ಬ್ಯುಸಿನೆಸ್ ಕಮ್ಯೂನಿಟಿ ವತಿಯಿಂದ ಮಹಮದ್ ಅಲಿ, ಜಿಶಾನ್ ಅಲಿ ಅಕ್ಬರ್ ಇನ್ನಿತರರು ಹಾಜರಿದ್ದರು.