ಭಟ್ಕಳ: ತಾಲೂಕಿನ ಬೇಂಗ್ರೆ ಪಂಚಾಯತ್ ವ್ಯಾಪ್ತಿಯ ಬೆಂಗ್ರೆ ಮಾವಿನಕಟ್ಟೆ ಭಾಗದಲ್ಲಿ ರಾ.ಹೆ.66ರಲ್ಲಿ ಲಿಂಕ್ ರೋಡ್ ನಿರ್ಮಾಣಕ್ಕೆ ಆಗ್ರಹಿಸಿ ಆ ಭಾಗದ ಗ್ರಾಮಸ್ಥರು ಇಲ್ಲಿನ ಸಹಾಯಕ ಆಯುಕ್ತರಿಗೆ ಮನವಿ ಅರ್ಪಿಸಿದರು.
ಹೆದ್ದಾರಿ 66ಕ್ಕೆ ಹೊಂದಿಕೊಂಡಂತೆ ಈ ಭಾಗದಲ್ಲಿ ಸುಮಾರು 8000ಕ್ಕೆ ಅಧಿಕ ಜನರು ವಾಸಿಸುತ್ತಿದ್ದು ನಿತ್ಯದ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು, ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ದಿನವೂ ಸಂಚರಿಸುತ್ತಿದ್ದು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಲಿಂಕ್ ರೋಡ್ ನಿರ್ಮಾಣದಿಂದ ಇಲ್ಲಿನ ಜನರಿಗೆ ಸೌಕರ್ಯ ಕಲ್ಪಿಸಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಭಾಗದಲ್ಲಿ ಬಸ್ ನಿಲ್ದಾಣ, ಚರಂಡಿ ವ್ಯವಸ್ಥೆಯೂ ಇಲ್ಲದೆ ವಾಹನಗಳು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು ಜನಸಾಮನ್ಯರು ಕಷ್ಟವನ್ನು ಪಡುವಂತಾಗಿದೆ. ನೂತನ ಹೆದ್ದಾರಿ ಕಾಮಗಾರಿ ಆರಂಭಗೊಂಡ ನಂತರ ಈ ಭಾಗದಲ್ಲಿ ಮತ್ತಷ್ಟು ಸಮಸ್ಯೆಗಳು ತಲೆದೂರುತ್ತಿವೆ. ಮಾವಿನಕಟ್ಟೆ ಪ್ರದೇಶವು ಈ ಭಾಗದ ಜನರ ಸರ್ಕಲ್ ಆಗಿದ್ದು ಈಗ ಕ್ರಾಸಿಂಗ್ ರಸ್ತೆ ಇಲ್ಲದ ಕಾರಣ ಜನರು ರಸ್ತೆಯನ್ನು ದಾಟಲು ಪರದಾಡುವಂತಾಗಿದೆ. ಹದ್ದಾರಿಯ ಇಕ್ಕೆಲಗಳಲ್ಲಿ ಸಾಕಷ್ಟು ಕೃಷಿ ಭೂಮಿಯನ್ನು ಮಾಡಿಕೊಂಡಿದ್ದು ರೈತರಿಗೆ ಹೆದ್ದಾರಿಯಿಂದಾಗಿ ತೊಂದರೆಯಾಗುತ್ತಿದೆ. ಲಿಂಕ್ ರೋಡ್ ನಿರ್ಮಾಣದಿಂದಾಗಿ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಂತಾಗುತ್ತದೆ ಎಂದು ಮನವಿಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ವಿಷ್ಣು ದೇವಾಡಿಗ, ಅನಂತ್ ನಾಯ್ಕ, ಗಣಪತಿ ನಾಯ್ಕ, ಅಣ್ಣಪ್ಪ ದೇವಾಡಿಗ, ಪುಂಡಲಿಕ ನಾಯ್ಕ, ಸದಾನಂದ ನಾಯ್ಕ ಸೇರಿದಂತೆ ಗ್ರಾಮಸ್ಥರು ಉಪಸ್ತಿತರಿದ್ದರು.