ಭಟ್ಕಳ: ಮನೆಯಲ್ಲಿ ಈದುಲ್ ಫಿತ್ರ ನಮಾಜ್ ನಿರ್ವಹಿಸುವಂತೆ ಖಾಝಿಗಳಿಂದ ಮನವಿ
ಭಟ್ಕಳ: ಪವಿತ್ರ ರಮಝಾನ್ ತಿಂಗಳ ಉಪವಾಸ ಕೊನೆಗೊಂಡ ಬಳಿಕ ಆಚರಿಸುವ ಈದುಲ್ ಫಿತ್ರ್ ಹಬ್ಬದ ವಿಶೇಷ ನಮಾಝನ್ನು ಈ ವರ್ಷ ತಮ್ಮ ತಮ್ಮ ಮನೆಗಳಲ್ಲೇ ನಿರ್ವಹಿಸುವಂತೆ ಭಟ್ಕಳದ ಎರಡು ಜಮಾಅತ್ ನ ಖಾಝಿಗಳು ನಿರ್ಧರಿಸಿದ್ದು ಈ ಕುರಿತಂತೆ ವಿಡಿಯೋ ಸಂದೇಶವೊಂದನ್ನು ಜಾರಿಗೊಳಿಸಿದ್ದಾರೆ.
ಮರ್ಕಝಿ ಖಲಿಫಾ ಜಮಅತುಲ್ ಮುಸ್ಲಿಮೀನ್ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದವಿ, ಮದನಿ ಹಾಗೂ ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಇಂದು ಎರಡೂ ಜಮಾಅತ್ ಮುಖಂಡರ ಸಭೆಯನ್ನು ನಡೆಸಿದ ಬಳಿಕ ಈ ನಿರ್ಧಾವನ್ನು ಪ್ರಕಟಿಸಿದ್ದು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ನಮಾಝ್ ನಿರ್ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಜಗತ್ತು ಪ್ರಸಕ್ತ ಸನ್ನಿವೇಶದಲ್ಲಿ ಮಹಾ ಗಂಡಾಂತರವೊಂದನ್ನು ಎದುರಿಸುತ್ತಿದ್ದು ಭಾರತ ಸರ್ಕಾರ ಮೇ ೩೦ರ ವರೆಗೆ ದೇಶದಲ್ಲಿ ಲಾಕ್ ಡೌನ್ ಘೋಷಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಮಹತ್ತರವಾದ ಕಾರ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಈದ್ ನಮಾಝನ್ನು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಮ್ಮ ಮನೆಗಳಲ್ಲೇ ನಿರ್ವಹಿಸುತ್ತ ದೇಶ ಹಾಗೂ ಜಗತ್ತು ಎದುರಿಸುತ್ತಿರುವ ಗಂಡಾಂತರದಿಂದ ಪಾರು ಮಾಡಲು ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರತಿಯೊಬ್ಬರು ಪ್ರಾರ್ಥಿಸಬೇಕೆಂದು ಮೌಲಾನ ಕ್ವಾಜಾ ಅಕ್ರಮಿ ಮದನಿ, ನದ್ವಿ ತಮ್ಮ ವಿಡಿಯೋ ಸಂದೇಶದಲ್ಲಿ ಭಟ್ಕಳದ ಸಮಸ್ತ ಮುಸ್ಲಿಮ್ ಸಮುದಾಯವನ್ನುದ್ದೇಶಿಸಿ ಮನವಿ ಮಾಡಿಕೊಂಡಿದ್ದಾರೆ.
ಸಂಕಷ್ಟದ ಸ್ಥಿತಿಯಲ್ಲಿ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಇದೊಂದು ಪರೀಕ್ಷೆಯಾಗಿದೆ. ಸಂಕಷ್ಟದ ಸಮಯ ಬಹಳ ದಿನಗಳ ಕಾಲ ಇರುವುದಿಲ್ಲ. ವಾತ್ಸವದಲ್ಲಿ ಸಂಕೀರ್ಣತೆಯೊಂದಿಗೆ ವೈಶಾಲ್ಯತೆಯೂ ಇದೆ ನಿಶ್ಚಯವಾಗಿಯೂ ಸಂಕೀರ್ಣತೆಯೊಂದಿಗೆ ವೈಶಾಲ್ಯತೆಯೂ ಇದೆ. ಆದುದರಿಂದ ದೇವನಿಚ್ಚಿಸಿದರೆ ಪರಿಸ್ಥಿತಿಯು ಬಹುಬೇಗನೆ ನಿಯಂತ್ರಣಕ್ಕೆ ಬರುತ್ತದೆ. ನಾವು ಮತ್ತೆ ಮೊದಲಿನಂತೆ ಬದುಕನ್ನು ಸಾಗಿಸಬಹುದಾಗಿದೆ. ಅಲ್ಲಿಯ ತನಕ ದೇಶದ ಕಾನೂನನ್ನು ಪಾಲಿಸುತ್ತ ಸುರಕ್ಷಿತರಾಗೋಣ ಎಂಬ ಸೇಂದೇಶವನ್ನು ಅವರು ಸಮುದಾಯಕ್ಕೆ ನೀಡಿದ್ದಾರೆ.