ಶಿಕ್ಷಕರ ನೇಮಕಾತಿ ಹಗರಣ; ಪ.ಬಂ. ಸಚಿವ ಪಾರ್ಥಾ ಚಟರ್ಜಿ ಬಂಧನ
ಹೊಸದಿಲ್ಲಿ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈಡಿ.)ವು ಪಶ್ಚಿಮ ಬಂಗಾಳದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಾರ್ಥಾ ಚಟರ್ಜಿಯವರನ್ನು ಶನಿವಾರ ಬಂಧಿಸಿದೆ,
ಶುಕ್ರವಾರ ಚಟರ್ಜಿಯವರ ಆಪ್ತ ಕಾರ್ಯದರ್ಶಿ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ದಾಳಿ ನಡೆಸಿ 20 ಕೋ.ರೂ.ಯನು ವಶಪಡಿಸಿಕೊಂಡಿದ ಈಡಿ. ಅವರನ್ನು ಬಂಧಿಸಿತ್ತು. ನಗದು ಹಣ ಪತ್ತೆಯ ಬಳಿಕ ರಾತ್ರಿಯಿಡೀ ಚಟರ್ಜಿಯವರನ್ನು ವಿಚಾರಣೆಗೊಳಪಡಿಸಿದ ಈಡಿ ಶನಿವಾರ ಬೆಳಗ್ಗೆ ಅವರನ್ನು ಬಂಧಿಸಿದೆ.
ವಿಚಾರಣೆ ಸಂದರ್ಭ ಚಟರ್ಜಿ ಅನಾರೋಗ್ಯದ ಬಗ್ಗೆ ದೂರಿದ್ದರು. ಅವರ ತಪಾಸಣೆ ನಡೆಸಿದ ಇಬ್ಬರು ವೈದ್ಯರು ಯಾವುದೇ ತೊಂದರೆಯಿಲ್ಲ ಎಂದು ಹೇಳಿದ ಬಳಿಕ ವಿಚಾರಣೆಯನ್ನು ಮುಂದುವರಿಸಲಾಗಿತ್ತು, ಚಟರ್ಜಿ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.