ಭಟ್ಕಳ: ವಿದ್ಯಾರ್ಥಿ ಜೀವನವು ಉತ್ತಮ ಜೀವನವಾಗಿದ್ದು ಮುಂದೆ ನಿಮಗೆ ಇಷ್ಟು ಪ್ರೀತಿ, ಕಾಳಜಿ ದೊರೆಯುವುದು ಕಷ್ಟವಾಗಬಹುದು, ವಿದ್ಯಾರ್ಥಿ ಜೀವನದ ಪ್ರತಿಯೊಂದು ಕ್ಷಣವನ್ನೂ ಕೂಡಾ ಅನುಭವಿಸಿರಿ ಎಂದು ಭಟ್ಕಳ ಉಪ ವಿಭಾಗದ ಎ.ಎಸ್.ಪಿ. ನಿಖಿಲ್ ಬಿ. ಅವರು ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಬೀನಾ ವೈದ್ಯ ಇಂಟರ್ನ್ಯಾಶನಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉತ್ತರ ಕನ್ನಡದಲ್ಲಿ ಕಬ್ಬಡ್ಡಿ ಮತ್ತು ಕ್ರಿಕೆಟ್ಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿರುವುದು ಕಂಡು ಬರುತ್ತಿದ್ದು ಯಾವುದೇ ಆದರೂ ಸಹ ನೀವು ಕ್ರೀಡೆಯಲ್ಲಿ ಭಾಗವಹಿಸಿ. ಪ್ರತಿದಿನ ಕನಿಷ್ಟ ಅರ್ಧ ಗಂಟೆಯಾದರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿಯಾಗುವುದು. ವಿದ್ಯಾರ್ಥಿಗಳು ಬರೇ ಓದುವುದು ಮಾತ್ರ ಮಾಡುವುದಕ್ಕಿಂತ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದೂ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಶಾಲೆಯ ಅಧ್ಯಕ್ಷ ಮಂಕಾಳ ಎಸ್. ವೈದ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ವಿದ್ಯಾರ್ಥಿ ಜೀವನದಲ್ಲಿ ಪಾಠಕ್ಕಿಂತ ಆಟವೇ ಹೆಚ್ಚು ಖುಷಿ ಕೊಡುವಂತದ್ದಾಗಿದೆ. ಓದಿನಲ್ಲಿ ನೀವು ಎನಾಗಬೇಕು ಎನ್ನುವ ಗುರಿಯೊಂದಿಗೆ, ನಿಮಗೆ ಇಷ್ಟವಾದ ವಿಷಯವನ್ನು ಅಧ್ಯಯನ ಮಾಡಿದಾಗ ಮಾತ್ರ ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಇಂಟರ್ನ್ಯಾಶನಲ್ ಶಾಲೆಯ ನಿರ್ದೇಶಕಿ ಪುಷ್ಪಲತಾ ಎಂ.ಎಸ್., ಪ್ರಾಂಶುಪಾಲ ಜಗನ್ನಾಥ ಚಿನ್ನೇಕರ್ ಉಪಸ್ಥಿತರಿದ್ದರು.
ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಯೀಮ್ ಘೋರಿ ನಿರ್ವಹಿಸಿದರು, ಪೂಜಾ ಭಟ್ಟ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ, ಕರಾಟೆ ಪ್ರದರ್ಶನ ಹಾಗೂ ದೇಶಭಕ್ತಿ ಗೀತೆಯ ನೃತ್ಯ ಎಲ್ಲರ ಗಮನ ಸೆಳೆಯಿತು.