ಮಂಡ್ಯ: ಮೊಬೈಲ್ ಫೋನ್ ಹೆಚ್ಚು ಬಳಕೆ ಮಾಡದಂತೆ ಬುದ್ಧಿ ಹೇಳಿದ ತಾಯಿಯನ್ನೇ ಪುತ್ರ, ಬಿಬಿಎಂ ವಿದ್ಯಾರ್ಥಿಯೊಬ್ಬ ಚಕ್ಕುಲಿ ಹೊರಳಿನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರ ಕೆ.ಆರ್.ರಸ್ತೆಯ ಮನೆಯೊಂದರ ಔಟ್ಹೌಸ್ನಲ್ಲಿ ವಾಸವಿದ್ದ ಲಕ್ಷ್ಮಿ (46) ಕೊಲೆಯಾದ ಮಹಿಳೆ. ಮನು ಶರ್ಮಾ (21) ತಾಯಿಯನ್ನೇ ಕೊಲೆ ಮಾಡಿದ ವಿದ್ಯಾರ್ಥಿ. ಘಟನೆ ಜುಲೈ 29ರಂದು ನಡೆದಿದ್ದು ಜುಲೈ 30ರಂದು ಬೆಳಕಿಗೆ ಬಂದಿದೆ. ಮನೆಯ ಮಾಲೀಕ ರಮೇಶ್ ಜುಲೈ 30ರಂದು ನೀಡಿದ್ದ ದೂರಿನನ್ವರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಆರೋಪಿಯ ಬೆನ್ನತ್ತಿದ ಪೊಲೀಸರು ಮನುಶರ್ಮಾನನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾದರು.
ತಾಯಿಯು ಮೊಬೈಲ್ ಬಳಸದಂತೆ ನಿರ್ಬಂಧ ವಿಧಿಸಿದ್ದರು. ಮನೆಯಿಂದ ಹೊರಗೆ ಹೋಗದಂತೆ ಬುದ್ಧಿ ಹೇಳುತ್ತಿದ್ದರು. ಇದರಿಂದ ಕೋಪಗೊಂಡು ಚಕ್ಕಲಿ ಹೊರಳಿನಿಂದ ತಲೆಗೆ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದರು. ಪ್ರಕರಣ ಪಶ್ಚಿಮ ಠಾಣೆಯಲ್ಲಿ ದಾಖಲಾಗಿದೆ