ಬೆಂಗಳೂರು : ಮಂಡ್ಯದ ಗಂಡು ಎಂಬ ಖ್ಯಾತಿಯ ನಟ- ರಾಜಕಾರಣಿ, ಮಾಜಿ ಕೇಂದ್ರ ಸಚಿವ ಅಂಬರೀಶ್ ಶನಿವಾರ ರಾತ್ರಿ ಹೃದಯಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿಳೆದಿದ್ದಾರೆ.
ಅವರು ಶ್ವಾಸಕೋಶ, ಉಸಿರಾಟ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.
ಪತ್ನಿ ಸುಮಲತಾ, ಮಗ ಅಭಿಷೇಕ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ತಂದೆ ಹುಚ್ಚೇಗೌಡ. ತಾಯಿ ಪದ್ಮಾವತಮ್ಮ. ಅವರು ಜನಿಸಿದ್ದು ಮೇ 29, 1952ರಲ್ಲಿ. ಅವರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಅವರ ಮೊದಲ ಚಿತ್ರ. ಈಚೆಗೆ ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತೋ ಅವರ ಕೊನೆ ಸಿನಿಮಾ. ಹುಟ್ಟೂರಿನ ಆಸ್ತಿಯನ್ನು ಪುತ್ರನ ಹೆಸರಿಗೆ ಬರೆದ ಅಂಬರೀಶ್ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಅಂಬರೀಶ್, ಕಾವೇರಿ ವಿವಾದದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದರು. ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅವರು, ಈ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿರಲಿಲ್ಲ. ತಮ್ಮ ಮಗ ಅಭಿಷೇಕ್ ಹೆಸರಿಗೆ ಆಸ್ತಿಯನ್ನು ಬರೆದಿದ್ದರು. ಇತ್ತೀಚೆಗೆ ಅವರ ಅನಾರೋಗ್ಯ ಕಾರಣಕ್ಕೆ ಆಗಾಗ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.
ಮಂಡ್ಯಕ್ಕೆ ಪಾರ್ಥೀವ ಶರೀರ:
ಮಂಡ್ಯಕ್ಕೆ ಅಂಬರೀಶ್ ಪ್ರಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ರವಾನಿಸಲು ರಕ್ಷಣಾ ಇಲಾಖೆ ಗ್ರೀನ್ ಸಿಗ್ನಲ್
ಬೆಂಗಳೂರು: ಅಗಲಿದ ನಟ , ಮಾಜಿ ಸಚಿವ ಅಂಬರೀಶ್ ಪಾರ್ಥಿವ ಶರೀರವನ್ನು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕಾಗಿ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ರವಾನಿಸಲು ಕೇಂದ್ರ ರಕ್ಷಣಾ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲು ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ಒದಗಿಸುವಂತೆ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ಬಳಸಲು ಅನುಮತಿ ನೀಡಿದ್ದಾರೆ.
ಅಂಬರೀಶ್ ಪಾರ್ಥಿವ ಶರೀರದ ಏರ್ ಲಿಫ್ಟ್ ಗೆ ರಕ್ಷಣಾ ಸಚಿವರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಕಂಟೀರವ ಸ್ಟೇಡಿಯಂನಿಂದ ಮಂಡ್ಯಕ್ಕೆ ಹೆಲಿಕಾಪ್ಟರ್ ನಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು ಎಂದು ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.