ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಮತ ಚಲಾಯಿಸಲು ಅರ್ಹರಾದ ಹತ್ತು ಲಕ್ಷಕ್ಕೂ ಅಧಿಕ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿರುವ ಆಘಾತಕಾರಿ ಅಂಶವನ್ನು ದಿಲ್ಲಿ ಮೂಲದ ಸಂಸ್ಥೆಯೊಂದು ಬಯಲು ಮಾಡಿದೆ.
ದಿಲ್ಲಿ ಮೂಲದ ನೀತಿ ಅಭಿವೃದ್ಧಿ ಸಂಶೋಧನೆ ಮತ್ತು ಸಮಾಲೋಚನೆ ಕೇಂದ್ರವು (ಸಿಆರ್ಡಿಡಿಪಿ) ನಡೆಸಿದ ಅಧ್ಯಯನದ ವರದಿಯ ಪ್ರಕಾರ, ಸಂಸ್ಥೆಯು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಅರ್ಹ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ ಮತ್ತು ಅವರ ಬಳಿ ಮತದಾರರ ಗುರುತಿನ ಚೀಟಿ ಕೂಡಾ ಇಲ್ಲ ಎಂಬುದು ತಿಳಿದುಬಂದಿದೆ.
ಸಂಸ್ಥೆಯು ಬೆಂಗಳೂರಿನ ಶಿವಾಜಿನಗರ, ಪುಲಕೇಶಿನಗರ (ಮುಸ್ಲಿಂ ಬಾಹುಳ್ಯದ ಫ್ರೇಝರ್ ಟೌನ್ ಸೇರಿದಂತೆ), ಹೆಬ್ಬಾಳ (ಅನೇಕ ಮುಸ್ಲಿಂ ಪ್ರದೇಶಗಳೂ ಸೇರಿ), ಜಯನಗರ, ಪದ್ಮನಾಭನಗರ, ಟಿ.ಎಂ ಲೇಔಟ್ ಹಾಗೂ ಹುಬ್ಬಳ್ಳಿ ಪೂರ್ವ ಮತ್ತು ಕೋಲಾರ ಮುಂತಾದ ಎಂಟು ವಿಧಾನಸಭಾ ಕ್ಷೇತ್ರಗಳ್ಲಲಿ ಅಂಕಿಅಂಶ ವಿಶ್ಲೇಷಣೆಯನ್ನು ಸಂಪೂರ್ಣಗೊಳಿಸಿದೆ. ಈ ವಿಶ್ಲೇಷಣೆಯಲ್ಲಿ 65,258 ಕುಟುಂಬಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಲಾಗದ ವಯಸ್ಕ ವ್ಯಕ್ತಿಗಳು ಇರುವುದು ಪತ್ತೆಯಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಬುಸಲೇಹ್ ಶರೀಫ್ ತಿಳಿಸಿದ್ದಾರೆ.
ಶಿವಾಜಿನಗರದಲ್ಲಿ 18,453 ಕುಟುಂಬಗಳನ್ನು ಗುರುತಿಸಲಾಗಿದ್ದು, ಈ ಪೈಕಿ 8,795 ಕುಟುಂಬಗಳಲ್ಲಿ ಕೇವಲ ಪ್ರತಿ ಮನೆಯಲ್ಲಿ ತಲಾ ಒಬ್ಬರ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿದೆ. ಆಶ್ಚರ್ಯವೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯಿರುವ ಕುಟುಂಬಗಳ ಪ್ರಮಾಣ ಶೇ.4.2 ಮಾತ್ರ. ಇದನ್ನು ಪರಿಗಣಿಸಿದರೆ, 790 ಮನೆಗಳಲ್ಲಿ ಮಾತ್ರ ಒಬ್ಬ ಮತದಾರ ಇರಬೇಕಿತ್ತು. ಶಿವಾಜಿನಗರ ಒಂದರಲ್ಲೇ ಸುಮಾರು 8,002 ಮುಸ್ಲಿಂ ಕುಟುಂಬಗಳಲ್ಲಿ ನೋಂದಾಯಿಸಲಾಗದ ವಯಸ್ಕರು ಇದ್ದಾರೆ ಎಂದು ವರದಿ ತಿಳಿಸಿದೆ. ಸಿಆರ್ಡಿಡಿಪಿಯು ಮುಸ್ಲಿಂ ಮತದಾರರು ಎಂಬ ಆ್ಯಂಡ್ರಾಯ್ಡ್ ಆ್ಯಪನ್ನು ಅಭಿವೃದ್ಧಿಪಡಿಸಿದೆ. ನೋಂದಾವಣೆಗೊಳ್ಳದ ಮತದಾರರು ಈ ಆ್ಯಪ್ನಲ್ಲಿ ತಮ್ಮ ವಿಳಾಸವನ್ನು ಸರಿಯಾಗಿ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿ ಹಾಕಬಹುದು ಮತ್ತು ಗುರುತಿನ ಚೀಟಿಯನ್ನು ಪಡೆಯಬಹುದು ಎಂದು ಅಬುಸಲೇಹ್ ತಿಳಿಸಿದ್ದಾರೆ. ಸಿಆರ್ಡಿಡಿಪಿಯು ಎಲ್ಲ 224 ಕ್ಷೇತ್ರಗಳ ವಿಶ್ಲೇಷಣೆಯನ್ನು ಸಂಪೂರ್ಣಗೊಳಿಸಲಿದೆ. ನಂತರ ಎಲ್ಲ ನಾಪತ್ತೆಯಾಗಿರುವ ಮತದಾರರು ತಮ್ಮ ಹೆಸರುಗಳನ್ನು ಆ್ಯಂಡ್ರಾಯ್ಡ್ ಆ್ಯಪ್ ಅಥವಾ ಜಾಲತಾಣದ ಮೂಲಕ ನಮೂದಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಸ್ವಯಂಸೇವಕರು ಈ ಕಾರ್ಯದಲ್ಲಿ ತನ್ನ ಜೊತೆ ಕೈಜೋಡಿಸುವಂತೆ ಸಿಆರ್ಡಿಡಿಪಿ ಮನವಿ ಮಾಡಿದೆ. ಪ್ರತಿಯೊಬ್ಬ ಸ್ವಯಂಸೇವಕನಿಗೂ 20ರಿಂದ 25 ಕುಟುಂಬಗಳ ಅರ್ಹ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಮನೆಮನೆಗಳಿಗೆ ಭೇಟಿ ನೀಡುವ ಕಾರ್ಯಕರ್ತರು ಮತದಾರರ ಗುರುತಿನ ಚೀಟಿಗಾಗಿ ಹೊಸದಾಗಿ ಅರ್ಜಿ ಹಾಕುವವರ ಮೊಬೈಲ್ ಸಂಖ್ಯೆಯನ್ನು ಆ್ಯಪ್ ಮೂಲಕ ನಮೂದಿಸಲಿದ್ದಾರೆ ಎಂದು ಅಬುಸಲೇಹ್ ತಿಳಿಸಿದ್ದಾರೆ. ಈ ಆ್ಯಪನ್ನು ಮಾರ್ಚ್ 17ರ ತನಕ 6,000 ಕಾರ್ಯಕರ್ತರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಸಿಆರ್ಡಿಡಿಪಿ ಈಗಾಗಲೇ 3,026 ಕಾರ್ಯಕರ್ತರನ್ನು ಪರೀಕ್ಷಾರ್ಥವಾಗಿ ಅಭಿಯಾನದಲ್ಲಿ ತೊಡಗಿಸಿದೆ. ಈ ಕಾರ್ಯಕರ್ತರು ಪ್ರತಿಮನೆಗೆ ತೆರಳಿ ನೋಂದಾವಣೆಯಾಗದ ಮತದಾರರು ತಮ್ಮ ಗುರುತಿನ ಚೀಟಿ ಪಡೆಯಲು ಸಹಾಯ ಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅಬುಸಲೇಹ್ ತಿಳಿಸಿದ್ದಾರೆ.