ಹೊಸದಿಲ್ಲಿ: ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪಿತ್ತಿದೆ.
ಬಾಬರಿ ಮಸೀದಿ ದ್ವಂಸ ಕ್ರಿಮಿನಲ್ ಪಿತೂರಿಯಾಗಿರಲಿಲ್ಲ, ಕೃತ್ಯ ಪೂರ್ವನಿಯೋಜಿತವಾಗಿರಲಿಲ್ಲ ಎಂದು ಹೇಳಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್ ಎಲ್ಲಾ 32 ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ.
32 ಆರೋಪಿಗಳ ಪೈಕಿ ಸಾಕ್ಷಿ ಮಹಾರಾಜ್, ಸಾಧ್ವಿ ರಿತಂಬರಾ, ವಿನಯ ಕಟಿಯಾರ್, ಚಂಪತ್ ರಾಯ್, ಪವನ್ ಪಾಂಡೆ ಸಹಿತ ಒಟ್ಟು 26 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಎಲ್.ಕೆ.ಅಡ್ವಾಣಿ, ಎಂಎಂ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಕೋರ್ಟಿಗೆ ಹಾಜರಾಗಿಲ್ಲ.
ಎಲ್.ಕೆ. ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರಂತಹ ಹಿರಿಯ ಬಿಜೆಪಿ ನಾಯಕರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಬಿಜೆಪಿ ನಾಯಕರಾದ ವಿನಯ ಕಟಿಯಾರ್ ಮತ್ತು ಸಾಧ್ವಿ ರಿತಂಬರಾ ಪ್ರಕರಣದ ಆರೋಪಿಗಳಾಗಿದ್ದರು.
ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು. ಒಟ್ಟು 48 ಜನರ ವಿರುದ್ಧ ಆರೋಪಗಳನ್ನು ರೂಪಿಸಲಾಗಿತ್ತಾದರೂ, ಅವರ ಪೈಕಿ 16 ಆರೋಪಿಗಳು ವಿಚಾರಣೆಯ ಅವಧಿಯಲ್ಲಿ ನಿಧನರಾಗಿದ್ದಾರೆ.