ಭಟ್ಕಳ: ನೆರೆಯ ಸಾಗರ ತಾಲೂಕಿನ ಜೋಗರಸ್ತೆಯಲ್ಲಿ ದರೋಡೆಗೆ ಯತ್ನಿಸಿದ ಆರೋಪದಲ್ಲಿ ಭಟ್ಕಳ ಮೂಲದ ಐದು ಜನರನ್ನು ಸಾಗರ ಠಾಣೆಯ ಪೊಲೀಸರು ಬಂಧಿಸಿದ್ದಾಗಿ ವರದಿಯಾಗಿದೆ.
ಬಂಧಿತರನ್ನು ಭಟ್ಕಳದ ಮುಹಮ್ಮದ್ ಮುಸ್ತಫಾ, ಅಕ್ರಮ್ ಹಸನ್, ಸುಹೇಲ್ ಗಂಗೋಳಿ, ಸಮೀರ್ ಆಹ್ಮದ್ ಹಾಗೂ ಅಬ್ದುಲ್ ಮುಈನ್ ಎಂದು ಗುರುತಿಸಲಾಗಿದೆ.
ಇವರು ಸೋಮವಾರ ತಡರಾತ್ರಿ ಸಾಗರ ತಾಲೂಕಿನ ಜೋಗ ರಸ್ತೆಯ ತಿರುವಿನಲ್ಲಿ ವಾಹನವೊಂದನ್ನು ದರೋಡೆಗೆ ಪ್ರಯತ್ನಿಸಿದ್ದು ಆ ವಾಹನ ಗಸ್ತು ತಿರುಗುತ್ತಿದ್ದ ಪೊಲೀಸರ ವಾಹನ ಎಂದು ತಿಳಿದ ದರೋಡೆಕೋರರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಬೆನ್ನಟ್ಟಿದ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆರೋಪಿಗಳಿಂದ ಕಾರನ್ನು ವಶಪಡಿಸಿಕೊಂಡಿದ್ದು ಅದರಲ್ಲಿದ್ದ ಮಚ್ಚು, ಕಬ್ಬಿಣದ ರಾಡ್, ಮೆಣಸಿನ ಹುಡಿ, ಮರದ ದೊಣ್ಣೆ ಮತ್ತಿತರ ವಸ್ತುಗಳನ್ನು ಜಪ್ತುಪಡಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.