ಹುಬ್ಬಳ್ಳಿ: ರಾಜ್ಯದಲ್ಲಿ ಆಶಾ ಕಾರ್ಯಕರ್ತರ ಸಹಕಾರ ಸಂಘಗಳನ್ನು ರಚಿಸಿ ಡಿ.ಸಿ.ಸಿ.ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಧನ ಸಹಾಯ ಮಾಡಲು ಸಹಕಾರ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕೆ.ಸಿ.ಸಿ. ಬ್ಯಾಂಕ ಲಿಮಿಟೆಡ್,
ಧಾರವಾಡ ಸಹಕಾರ ಹಾಲೂ ಒಕ್ಕೂಟ ನಿಗಮ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಕೋವಿಡ್-19 ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದರು.
ಮುಖ್ಯ ಮಂತ್ರಿಗಳ ಕೊವೀಡ್ ಪರಿಹಾರ ನಿಧಿಗೆ ರಾಜ್ಯದ ಸಹಕಾರಿ ಬ್ಯಾಂಕುಗಳಿಂದ 52 ಕೋಟಿ ರೂಪಾಯಿಗಳ ದೇಣಿಗೆ ನೀಡಲಾಗಿದೆ. ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರು ಕೊರೋನಾ ವಾರಿಯರ್ಸ್ ಗಳಾಗಿ ಕೆಲಸ ನಿರ್ವಹಿಸಿದ್ದಾರೆ. ಕುಟುಂಬ ಹಾಗೂ ತಮ್ಮ ಜೀವವನ್ನು ಪಣಕಿಟ್ಟು ಕರ್ತವ್ಯ ನಿರ್ವಹಿಸಿದ ಇವರಿಗೆ, ಲಾಭದಲ್ಲಿರುವ ಸಹಕಾರಿ ಸಂಘಗಳಿಂದ ಹಣ ಸಂಗ್ರಹಿಸಿ 3 ಸಾವಿರ ರುಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಂತ ಹಂತವಾಗಿ ಜಿಲ್ಲಾ ಮಟ್ಟದ ಸಹಾಕಾರಿ ಸಂಘಗಳಿಂದ ಹಣ ಸಂಗ್ರಹಿಸಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುವುದು. ರಾಜ್ಯದಲ್ಲಿ ಈಗ ಇರುವ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂಪಾಯಿವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಮಾದರಿಯಲ್ಲಿ ಆಶಾ ಕಾರ್ಯಕರ್ತೆರ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಧನ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಕಾರ್ಯ ಶ್ಲಾಘನೆ
ನಂಜನಗೂಡು ಔಷದ ಕಾರ್ಖಾನೆಯ 84 ಕಾರ್ಮಿಕರಿಗೆ ಕೊವೀಡ್ 19 ಸೋಂಕ ಧೃಡಪಟ್ಟ ಮೇಲೆ ಮೈಸೂರು ಜಿಲ್ಲಾಡಳಿತ ಚಿಂತಗೆ ಈಡಾಗಿತ್ತು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ್ ಶೆಟ್ಟರ್ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ, ಸಹಾಯಗಳನ್ನು ನೀಡುವುದರೊಂದಿಗೆ ವಿಪತ್ತಿನಿಂದ ಪಾರಾಗುವಂತೆ ಮಾಡಿದರು. ಕಾರ್ಖಾನೆಯನ್ನು ತಕ್ಷಣ ಮುಚ್ಚಿ, ನಂಜನಗೂಡು ಪ್ರದೇಶವನ್ನು ಸೀಲ್ ಮಾಡಲಾಯಿತು. ಕಾರ್ಖಾನೆಯಲ್ಲಿ1550 ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಗೆ ಸೋಂಕು ಹರಡದಂತೆ ತಡೆಯಲಾಯಿತು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವರು 50 ಸಾವಿರ ಆಹಾರದ ಧಾನ್ಯದ ಕಿಟ್ ನೀಡುವುದರ ಮೂಲಕ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಹಾಯ ಒದಗಿಸಿದರು ಎಂದು ಸಚಿವ ಎಸ್.ಟಿ ಸೋಮಶೇಖರ್ ಈ ವೇಳೆ ಸ್ಮರಿಸಿದರು.
ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾಭದಲ್ಲಿರುವ ವಿವಿಧ ಸಹಕಾರ ಸಂಘಗಳಿಂದ ಈಗಾಗಲೇ ಜೂನ್.20ರ ವರೆಗೆ 178 ಜನ ಆಶಾ ಕಾರ್ಯಕರ್ತೆಯರಿಗೆ ರೂ.5 ಲಕ್ಷ 34 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಸಂಬಂಧಿಸಿದ ಸಹಕಾರ ಸಂಘಗಳಿಂದ ನೀಡಲಾಗಿದೆ. ಇಂದು 100 ಜನ ಆಶಾ ಕಾರ್ಯಕರ್ತೆಯರಿಗೆ ಒಟ್ಟು ರೂ. ಮೂರು ಲಕ್ಷಗಳ ಪ್ರೋತ್ಸಾಹಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಶಾಸಕರಾದ ಬಸವರಾಜ ಹೊರಟ್ಟಿ, ಪ್ರಸಾದ್ ಅಬ್ಬಯ್ಯ, ವಿ.ಎಸ್.ಸಂಕನೂರ, ಪ್ರದೀಪ್ ಶೆಟ್ಟರ್, ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಬಾಪೂಗೌಡ, ಜಿಲ್ಲಾಧಿಕಾರಿ ದೀಪಾ ಚೋಳನ್, ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ.ಪಾಟೀಲ, ಕೆ.ಸಿ.ಸಿ. ಬ್ಯಾಂಕ್ ಹಾಗೂ ಸಹಕಾರ ಹಾಲೂ ಒಕ್ಕೂಟದ ನಿರ್ದೇಶಕರುಗಳು, ಜಿಲ್ಲಾ ಆರೋಗ್ಯಧಿಕಾರಿ ಯಶವಂತ ಮದೀನಕರ್, ಸಹಕಾರಿ ಸಂಘಗಳ ಉಪನಿಬಂಧಕ ಗಂಗಾಧರ ಗಚ್ಚಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.