ಕುಂದಾಪುರ: ತಾಲೂಕಿನ ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಅವರ ಮೇಲೆ ಹಲ್ಲೆಗೈದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮೋಹನಚಂದ್ರ ಅವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಬೈಂದೂರು ವಲಯದ ಶಿಕ್ಷಕರು ಧರಣಿ ನಡೆಸಿ ಬೈಂದೂರು ತಹಶಿಲ್ದಾರ್ ಹಾಗೂ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ ಉಪ್ಪುಂದ ಸರಕಾರಿ ಉರ್ದು ಶಾಲೆಯಲ್ಲಿ ಹಿಂದೆ ನಾಲ್ಕು ಜನ ಖಾಯಂ ಶಿಕ್ಷಕರಿದ್ದರು. ಆದರೆ ಎಲ್ಲರಿಗೂ ಕಿರುಕುಳ ನೀಡಿದ್ದರಿಂದ ಅವರು ವರ್ಗಾವಣೆ ತೆಗೆದುಕೊಂಡಿದ್ದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹಿಂದೆ ಮಮತಾ ಎಂಬ ಶಿಕ್ಷಕಿಗೆ ಹಲ್ಲೆ ನಡೆಸಿದ್ದ. ಈಗ ಮಲ್ಲಿಕಾ ಎಂಬ ಶಿಕ್ಷಕಿಗೆ ಹಲ್ಲೆ ನಡೆಸಿದ್ದಾರೆ. ಇನ್ನೋರ್ವ ಶಿಕ್ಷಕಿಯಲ್ಲಿ ಅಗತ್ಯವಾಗಿ ಮಾಹಿತಿ ಹಕ್ಕು ಮೂಲಕ ಕಿರುಕುಳ ನೀಡಲು ತಯಾರಾಗಿದ್ದ. ಎಸ್ಡಿಎಂಸಿ ಅವರಿಂದಲೇ ಶಿಕ್ಷಕರಿಗೆ ಕಿರುಕುಳವಾಗುತ್ತಿರುವುದು ವಿಷಾದನೀಯ ಎಂದ ಅವರು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಬೇಕು ಮತ್ತು ಗಡಿಪಾರು ಮಾಡಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದ್ದು, ನಮ್ಮ ಬೇಡಿಕೆ ಈಡೇರದೇ ಹೋದರೆ ಶಾಲೆಗೆ ಹೋಗುವ ಬದಲು ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಧರಣಿ ಕೂರುತ್ತೇವೆ ಎಂದು ಎಚ್ಚರಿಸಿದರು.