ಶಿರಸಿ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹12ಸಾವಿರ ಗೌರವಧನ ನಿಗದಿಗೊಳಿಸಬೇಕು. ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆರಯರ ಸಂಘ ನೀಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸ್ಥಳೀಯ ಘಟಕ ಬೆಂಬಲ ಸೂಚಿಸಿದೆ.
ಶುಕ್ರವಾರ ತಾಲ್ಲೂಕು ವೈದ್ಯಾಧಿಕಾರಿ ಕಚೇರಿಯ ಬಳಿ ಸೇರಿದ್ದ ಸಂಘಟನೆ ಪ್ರಮುಖರು, ವೈದ್ಯ ಸತೀಶ ಭಟ್ಕಳ ಅವರಿಗೆ ಮನವಿ ಸಲ್ಲಿಸಿದರು. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಜೂನ್ 30ರಂದು ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದ್ದರು. ಸರ್ಕಾರ ಈ ಬಗ್ಗೆ ಸ್ಪಂದಿಸದ ಕಾರಣ, ಅನಿರ್ದಿಷ್ಟಾವಧಿ ಕಾರ್ಯ ಸ್ಥಗಿತಗೊಳಿಸಿ, ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಕೊರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತಯರಿಗೆ ಸರಿಯಾದ ವೇತನ ದೊರೆಯುತ್ತಿದೆ. ಅನಿಶ್ಚಿತ ವೇತನದಿಂದಾಗಿ ಆಶಾ ಕಾರ್ಯಕರ್ತರು ಹೈರಾಣಾಗಿದ್ದಾರೆ. ಆಶಾ ಕಾರ್ಯಕರ್ತೆಯರ ಕನಿಷ್ಠ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಸ್ಥಳೀಯ ಘಟಕದ ಅಧ್ಯಕ್ಷೆ ಸುಷ್ಮಾ ಮಡಿವಾಳ, ಪ್ರಮುಖರಾದ ಸುಮಿತ್ರಾ, ಅನಿತಾ, ಜಾನಕಿ, ಚಾಂದ್ಬಿ ಇದ್ದರು