ಗಾಂಧಿ ಪಾರ್ಕು, ಗಾಂಧಿ ಬಝಾರ್,ಗಾಂಧೀ ರಸ್ತೆಯಲ್ಲಿ ’ಮಹಾತ್ಮ’ ನನ್ನು ಹುಡುಕುತ್ತ.....
ಎಂ.ಆರ್.ಮಾನ್ವಿ
ಗಾಂಧಿ ಪಾರ್ಕು, ಗಾಂಧಿ ಬಝಾರ್, ಗಾಂಧಿ ರೋಡ್, ಗಾಂಧಿ ಸರ್ಕಲ್, ಗಾಂಧಿ ಸರ್ಕಸ್ ಇತ್ಯಾದಿ, ಇತ್ಯಾದಿ,,, ಗಳಿಲ್ಲದ ಊರು ಕಲ್ಪನೆಗೂ ನಿಲುಕದ್ದು. ಏಕೆಂದರೆ ನಮ್ಮ ದೇಶದ ಪ್ರತಿಯೊಂದು ಹಳ್ಳಿ, ಗ್ರಾಮ, ಪಟ್ಟಣ, ನಗರವೆನ್ನದೆ ಪ್ರತಿಯೊಂದು ಕುಗ್ರಾಮವೇ ಆಗಲಿ ಅಲ್ಲಿ ಗಾಂಧಿ ಪಾರ್ಕು ಇಲ್ಲವೆ ಗಾಂಧಿ ಬಝಾರ್ ಇರಲೆಬೇಕು. ಅಂದ ಹಾಗೆ ಗಾಂಧಿಯ ತತ್ವಾದರ್ಶಗಳಿಗೂ, ಇಲ್ಲಿ ಪ್ರಸ್ತಾಪಿತ ಗಾಂಧಿ ಹೆಸರಿನ ಸ್ಥಳಗಳಿಗೂ ಯಾವುದೇ ಸಂಬಂಧವೇ ಇಲ್ಲ. ಇಲ್ಲಿ ಗಾಂಧಿ ಕೇವಲ ಪ್ರತಿಮೆ ಮಾತ್ರ.ಉಳಿದೆಲ್ಲವೂ ಗಾಂಧಿಜೀಯವರ ಬದುಕಿಗೆ ವಿರುದ್ಧವಾಗಿರುವ ಚಟುವಟಿಕೆಗಳು ಮಾತ್ರ. ಗಾಂಧಿಜೀಯವರ ಹೆಸರು ಇಟ್ಟುಕೊಂಡ ಈ ಪಾರ್ಕುಗಳು, ಬಝಾರ್ ಗಳು ಗಾಂಧಿ ತತ್ಪ, ಗಾಂಧಿ ಸಂದೇಶದ ಗಂಧಗಾಳಿಯಿಲ್ಲದೆ ಕೇವಲ ಹೆಸರಿನಲ್ಲಿ ಮಾತ್ರ ಗಾಂಧಿಯನ್ನು ಕಾಣುವಂತಾಗಿದ್ದು ಈ ದೇಶದ ದುರಂತ.
ಗಾಂಧಿ ಬಝಾರ್, ಗಾಂಧಿ ಪಾರ್ಕುಗಳಲ್ಲಿ ಆ ಮಹಾತ್ಮನನ್ನು ಅನ್ವೇಷಿಸುತ್ತ ನಡೆದರೆ, ಗಾಂಧಿ ತತ್ವಗಳಿಗೆ ವಿರುದ್ಧವಾಗಿರುವುದನ್ನೆ ನಾವು ಕಂಡಕೊಳ್ಳಲು ಸಾಧ್ಯ. ಗಾಂಧಿಜೀ ಯವರ ಸಂದೇಶಗಳ ಲವಲೇಶವೂ ನಮಗೆ ಕಾಣಸಿಗದು. ಇಂದು ಕಂಡು ಬರುವ ಎಲ್ಲ ಗಾಂಧಿ ಪಾರ್ಕುಗಳು ವ್ಯಭಿಚಾರ, ವ್ಯಸನ, ಜೂಜು, ನಶೆ, ಶೋಕಿಯ ಅಡ್ಡೆಗಳಾಗಿ ಮಾರ್ಪಟ್ಟಿದ್ದು ಗಾಂಧಿಜೀಯ ತತ್ವಾಸಂದೇಶಗಳು ದಿಕ್ಕುಕಾಣದೆ ಮಾಯವಾಗಿರುವುದು ಕಂಡು ಬರುತ್ತದೆ.
ಕಾಲೇಜಿಗೆ ಚಕ್ಕರ್ ಹೊಡೆದ ಹುಡುಗ ಹುಡುಗಿಯರ ಒಂದು ದೊಡ್ಡ ದಂಡೇ ಗಾಂಧಿ ಪಾರ್ಕಿನಲ್ಲಿ ಬಿಡಾರ ಬಿಟ್ಟಿರುವುದನ್ನು ಕಂಡರೆ ಗಾಂಧಿತತ್ವಗಳು ನಮ್ಮ ಯುವ ಸಮೂಹದಿಂದ ಯಾವರೀತಿ ಮಾಯವಾಗಿವೆ ಎಂಬುದು ಅರಿವಿಗೆ ಬಾರದೆ ಇರದು. ಮಧ್ಯವ್ಯಸನಿಗಳು, ಜೂಜುಕೋರರು, ಸಮಾಜಕ್ಕೆ ಹೊರೆಯಾದವರ ಆಶ್ರಯ ತಾಣಗಳಾಗಿ ಗಾಂಧಿ ಪಾರ್ಕುಗಳು ಕೆಸಲ ಮಾಡುತ್ತಿವೆ. ೧೯೪೮ ರಂದು ಅಪ್ಪಟ ದೇಶಪ್ರೇಮಿ! ಯೊಬ್ಬನ ಗುಂಡಿಗೆ ಬಲಿಯಾದಂದಿನಿಂದ ಗಾಂಧಿಜೀ ಯವರು ಕಲ್ಲಾಗಿ ಹೋಗಿದ್ದು ಪ್ರತಿ ಪಾರ್ಕು, ಬಝಾರ್ ನಲ್ಲಿ ಮೂರ್ತಿರೂಪ ತೆಳೆದು ಯಾವುದನ್ನು ತಮ್ಮ ಬದುಕಿನುದ್ದಕ್ಕೂ ವಿರೋಧಿಸುತ್ತ ಬಂದರೂ ಅದುವೆ ತಮ್ಮ ಕಾಲಬುಡದಲ್ಲಿ ನಡೆಯುತ್ತಿದ್ದರೂ ಏನನ್ನು ಹೇಳದ ಸ್ಥಿತಿಯಲ್ಲಿದ್ದಾರೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನ ಕಥೆಯೂ ಇದುವೆ ಆಗಿದೆ. ತಮ್ಮ ಕಣ್ಮುಂದೆಯೇ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದರೂ, ದೇಶದಲ್ಲಿ ಅತ್ಯಾಚಾರ, ಅನಾಚಾರಗಳು, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಿದ್ದರೂ ಕಣ್ಣಿದ್ದೂ ಕುರುಡರಾಗಿದ್ದೇವೆ. ಗಾಂಧಿಜೀಯವರ ತತ್ವ ಸಿದ್ಧಾಂತಗಳನ್ನು ಅಣುಕಿಸುವ ರೀತಿಯಲ್ಲಿ ಪಾರ್ಕಿನಲ್ಲಿ ಮೂರ್ತಿರೂಪ ತಳೆದಿರುವ ಗಾಂಧಿ ಪ್ರತಿಮೆಗಳಂತಾಗಿದ್ದೇವೆ. ನಾವು ಜೀವಂತವಿದ್ದರೂ ಕಲ್ಲುಗಳಂತೆ ನಿರ್ಜೀವಿಗಳಾಗಿದ್ದೇವೆ. ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಕೆಡುಕುಗಳನ್ನು ಕಂಡೂ ನಾವು ಸುಮ್ಮನಾಗಿದ್ದೇವೆ. ನಮ್ಮ ತುಟಿಗಳು ಅದಕ್ಕಾಗಿ ತೆರೆದುಕೊಳ್ಳುವುದಿಲ್ಲ. ಯಾಕಾಗಿ ನಾವು ನಿರ್ಜೀವಿಗಳಾಗಿದ್ದೇವೆ?
ಗಾಂಧಿಜೀ ಒಮ್ಮೆ ಬದುಕಿ ಬಂದರೆ ನಮ್ಮನ್ನು ನಮ್ಮ ದೇಶವನ್ನು ಕಂಡು ಅವರ ಪ್ರತಿಕ್ರಿಯೆ ಏನಾಗಿರುತ್ತೇ ಎನ್ನುವುದನ್ನು ಕವಿಯೊಬ್ಬ ಬಹಳ ಮಾರ್ಮಿಕವಾಗಿಯೇ ಹೇಳಿದ್ದಾರೆ.
’ಗಾಂಧಿಜೀ ಮರಳಿ ಬಂದರೆ ಇಲ್ಲಿ
ಹುಡುಕುತಲಿರುವರು ಭಾರತವು ಎಲ್ಲಿ?
ಸತ್ಯ ಅಹಿಂಸೆ ದೇಶವೆಲ್ಲಿ
ನ್ಯಾಯಾ ನಿಷ್ಠೆಯ ಮಂದಿರವೆಲ್ಲಿ
ಗಾಂಧಿಜೀ ಬಂದರೆ ಇಲ್ಲಿ....
ಶರಾಬು ದೊರಕದ ಊರುಗಳೆಲ್ಲಿ
ದರೋಡೆ ನಡೆಯದ ಕೇರಿಗಳೆಲ್ಲಿ
ಗಾಂಧಿ ಜೀ ಮರಳಿ ಬಂದರೆ ಇಲ್ಲಿ....
ಹೌದು ನಿಜಕ್ಕೂ ಒಂದು ವೇಳೆ ಗಾಂಧಿಜಿಯವರೇನದರೂ ಮರಳಿ ಬಂದರೆ ದಿಕ್ಕು ತೋಚದೆ ಈ ದೇಶದ ಸಹವಾಸವೇ ಬೇಡಪ್ಪ ಎಂದು ಮತ್ತೆ ಮರಳಿ ಹೋಗಬಹುದೇನೋ. ಏಕೆಂದರೆ ಅಂತಹ ಸ್ಥಿತಿಯಲ್ಲಿಂದು ನಾವು ಬದುಕುತ್ತಿದ್ದೇವೆ.ದೇಶದ ಪ್ರಗತಿಯನ್ನು ಜಪಿಸುತ್ತಲೇ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ, ಮನುಷ್ಯ ಪ್ರೇಮದ ನಾಟಕವಾಡುತ್ತಲೇ ಮನುಕುಲದ ಮಾರಣ ಹೋಮ ನಡೆಸುತ್ತಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಆ ಮಹಾತ್ಮನಿಗೇನು ಕೆಲಸ?
ಗಾಂದಿ ಬಝಾರ್ ಗಳೆಂದು ಕರೆಸಿಕೊಳ್ಳುವ ನಮ್ಮ ವ್ಯಾಪಾರ ಕೇಂದ್ರಗಳಲ್ಲಂತೋ ಬರಿ ಮೋಸ, ವಂಚನೆಯ ಜಾಲದಂತಾಗಿವೆ. ಒಬ್ಬನೆ ಒಬ್ಬ ಪ್ರಮಾಣಿಕ ವರ್ತಕ ನಮಗೆ ಸಿಗಲಾರ. ತಮ್ಮ ವಸ್ತುವನ್ನು ಹೇಗಾದರೂ ಮಾರಾಟ ಮಾಡಿ ಅದರಿಂದ ಅಧಿಕ ಲಾಭಗಳಿಸುವ ಲಾಭಕೋರರು ಗ್ರಹಕರ ಸುತ್ತ ಗಿರಕಿ ಹೊಡೆಯುತ್ತಿರುತ್ತಾರೆ. ಸುಳ್ಳು ಹೇಳಿ ಗ್ರಹಕರನ್ನು ವಂಚಿಸುವ ವಿಶ್ವಜಾಲವೇ ನಿರ್ಮಾಣವಾಗಿದೆ. ಇಂತಹದ್ದರಲ್ಲಿ ಗಾಂಧಿಜೀಯವರ ಪ್ರಮಾಣಿಕತೆಗೆ ಇಲ್ಲಿ ಬೆಲೆಯಾದರೂ ಹೇಗೆ ಲಭಿಸಬಲ್ಲದು. ಗಾಂಧೀ ಈಗ ಪ್ರತಿಮೆಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದ್ದಾರೆ.
ಗಾಂಧಿಯನ್ನು ಮುಂದಿಟ್ಟುಕೊಂಡು ದೇಶವನ್ನು ಸ್ವಚ್ಚಗೊಳಿಸುವ ಕೆಲಸಕ್ಕೆ ಕೈ ಹಾಕಿರುವುದೇನೂ ಪ್ರಶಂಸನೀಯ. ಆದರೆ ಇದೇ ವೇಳೆ ನಮ್ಮ ಹೃದಯ,ಮನಸ್ಸುಗಳಲ್ಲಿ ಶೇಖರಣಗೊಂಡಿರುವ ಕಲ್ಮಷವನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡಬೇಕಾಗಿರುವುದು ನಮ್ಮ ದೇಶದ ಪ್ರತಿಯೊಬ್ಬ ನಾಗರೀಕರನ ಕರ್ತವ್ಯವೂ ಹೌದು. ಕೇವಲ ‘ಮನ್ ಕಿ ಬಾತ್’, ಟಿ.ವಿ. ಜಾಹಿರಾತು, ಬ್ಯಾನರ್ ಗಳ ಮೂಲಕ ದೇಶವನ್ನು ದೇಶದ ಜನರ ಹೃದಯಗಳಲ್ಲಿ ಬೆಳೆಯುತ್ತಿರುವ ಕೊಳೆಯನ್ನು ಸ್ವಚ್ಚಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ’ಸಚ್ಚಿಬಾತ್, ”ಕಾಮ್ ಕಿ ಬಾತ್’ ”ಕರ್ತವ್ಯ್ ಕಿ ಬಾತ್’ ಆಗಬೇಕು. ಕೇವಲ ಮನ್ ಕಿ ಬಾತ್ ನಿಂದ ದೇಶ ಅಭಿವೃದ್ಧಿ ಸಾಧಿಸಬಹುದಾಗಿದ್ದರೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ‘ಮನ್ ಕಿ ಬಾತ್’ ಮೂಲಕ ಇಡೀ ದೇಶ ಅಭಿವೃದ್ಧಿ ಕಾಣಬೇಕಿತ್ತು. ಆದರೆ ಹಾಗೆ ಆಗಲಿಲ್ಲ ಎನ್ನುವುದು ದೇಶದ ಪ್ರಸಕ್ತ ಸ್ಥಿತಿಗತಿಗಳು ಬೆಟ್ಟು ಮಾಡಿ ತೋರಿಸುತ್ತಿವೆ.
ಗಾಂಧೀಜಿಯವರ ಆಶ್ರಯದಲ್ಲಿ ಮೂರು ಕೋತಿಗಳು ಸಾರುವ ಸಂದೇಶವಾದರೂ ಏನು? ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟ ಮಾತುಗಳನ್ನು ಆಡಬೇಡಿ ಎಂದಾಗಿದೆ. ಆದರೆ ’ಗಾಂಧೀ’ ಎಂಬ ಹೆಸರಿನಲ್ಲಿರುವ ತಾಣಗೆಲ್ಲ ಈ ಮೂರನ್ನು ಬಿಟ್ಟಿವೆ. ಕೆಟ್ಟದನ್ನೇ ನೋಡುವ, ಕೆಟ್ಟದ್ದನ್ನೆ ಆಡುವ ಮತ್ತು ಕೆಟ್ಟದ್ದನ್ನೆ ಮಾಡುವ ಗುರಿಯೊಂದಿಗೆ ಮುನ್ನೆಡೆಯುತ್ತಿರುವಂತೆ ತೋರುತ್ತಿದೆ. ಇದಕ್ಕೆ ದೇಶದ ಯುವ ಶಕ್ತಿಯೂ ಕೈಜೋಡಿಸಿ ಮಹಾತ್ಮನ ತತ್ವಾದರ್ಶಗಳನ್ನು ಗಾಳಿಗೆ ತೂರಿದಂತೆ ಭಾಸವಾಗುತ್ತಿದೆ. ನಮ್ಮ ದೇಶದ ರಾಜಕಾರಣ ಎತ್ತ ಸಾಗುತ್ತಿದೆ. ದೇಶಕ್ಕಾಗಿ ತನ್ನೆಲ್ಲ ಸ್ವಾರ್ಥವನ್ನು ಬದಿಗೊತ್ತಿ ತುಂಡು ಬಟ್ಟೆಯೊಂದಿಗೆ ಹೋರಾಡಿದ ಆ ಮಹಾತ್ಮನೆಲ್ಲಿ? ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ವಿದೇಶಿಗರಿಗೆ ಮಾರಿಕೊಳ್ಳುತ್ತಿರುವ ಇಂದಿನ ರಾಜಕರಣವೆಲ್ಲಿ? ತುಲನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.
ಗಾಂಧೀಜಿವರ ಕುರಿತಂತೆ ಅವರ ಸಾಧನೆಗಳನ್ನು ಹುಡುಕುತ್ತ ಈ ಗಾಂಧಿ ಬಝಾರ್, ಗಾಂದೀ ಪಾರ್ಕು, ಗಾಂಧೀ ರಸ್ತೆಯಲ್ಲೊಮ್ಮೆ ತಿರುಗಾಡಿದರೆ ಗಾಂಧಿಯನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.