ಧಾರವಾಡ: ಸೈನಿಕರು ಮತ್ತು ಅವಲಂಬಿತ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕರು ಧ್ವಜಗಳನ್ನು ಖರೀದಿಸಿ , ಸೈನಿಕರ ಕಲ್ಯಾಣ ನಿಧಿಗೆ ಉದಾರ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಧ್ವಜದ ಚಿತ್ರಗಳು ಮತ್ತು ಸ್ಟಿಕ್ಕರುಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ದೇಶದ ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂದರು.
ನಿವೃತ್ತ ಏರ್ ಕಮೋಡರ್ ಸಿ.ಎಸ್.ಹವಾಲ್ದಾರ್ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ದೊರೆತ ಕೂಡಲೇ, ದೇಶದ ರಕ್ಷಣಾ ಪಡೆಗಳ ಸೈನಿಕರ ಕಲ್ಯಾಣಕ್ಕಾಗಿ ಭಾರತದ ಮೊದಲ ರಕ್ಷಣಾ ಸಚಿವ ಬಲದೇವ ಸಿಂಗ್ ನೇತೃತ್ವದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಅವರ ಕಾಳಜಿಯಿಂದಾಗಿ 1949 ಡಿಸೆಂಬರ್ 7 ರಿಂದ ಈ ಆಚರಣೆ ಜಾರಿಗೊಂಡಿತು ಎಂದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ವಿಂಗ್ ಕಮಾಂಡರ್ ಈಶ್ವರ ಕೊಡೊಳ್ಳಿ, ಎಸ್.ಎಂ.ತುಗಶೆಟ್ಟಿ,ಅರವಿಂದ ಶಿಗ್ಗಾಂವ್, ಬ್ರಿಗೇಡಿಯರ್ ಎಸ್.ಜಿ.ಭಾಗವತ್, ಪಿ.ವಿ.ಹಿರೇಮಠ, ಸಿ.ಯು.ಬೆಳ್ಳಕ್ಕಿ, ಕರಣ್ ದೊಡ್ಡವಾಡ, ಎಂ.ವಿ.ಕರಮರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.