ತಿರುವನಂತಪುರಂ : ಕೇರಳದಲ್ಲಿ ಸಕ್ರಿಯವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲು ತಲವಾರುಗಳನ್ನು ಸಂಗ್ರಹಿಸುತ್ತಿದೆ ಎಂಬ ಆರೋಪ ಹೊರಿಸುವಂತಹ ಸಾಮಾಜಿಕ ಜಾಲತಾಣ ಪೋಸ್ಟ್ ಒಂದು ವೈರಲ್ ಆಗಿದೆ.
“ಹಿಂದೂಗಳೇ ನಿದ್ರಿಸುತ್ತಾ ಇರಿ. ಮುಸ್ಲಿಮರು ನಿಮ್ಮ ವಿರುದ್ಧ ರಕ್ತಪಾತ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಕೇರಳದಲ್ಲಿ ಪಿಎಫ್ಐ ಫ್ಯಾಕ್ಟರಿ ಮೇಲೆ ನಡೆದ ದಾಳಿಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ದೇಶದಾದ್ಯಂತ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿರುವ ಮದ್ರಸಾ ಮತ್ತು ಮಸೀದಿಗಳಿಗೆ ಸರಬರಾಜು ಮಾಡಲಾಗುತ್ತಿದೆ,'' ಎಂಬ ಅರ್ಥದಲ್ಲಿ ಈ ವಿವಾದಾಸ್ಪದ ಪೋಸ್ಟ್ ಮಾಡಲಾಗಿದೆ.
‘ಇಂಡಿಯಾ ಟುಡೇ’ಯ ವೈರಲ್ ಟೆಸ್ಟ್ ತಂಡ ಈ ಸಂದೇಶ ಮತ್ತು ಫೋಟೋವನ್ನು ಪರಾಮರ್ಶಿಸಿದ್ದು ಚಿತ್ರದಲ್ಲಿ ಮುರುಕಲು ಸ್ಥಿತಿಯಲ್ಲಿರುವ ಕೊಠಡಿಯ ಶೆಲ್ಫುಗಳಲ್ಲಿ ಆಯುಧಗಳನ್ನು ಪೇರಿಸಿಟ್ಟಿದ್ದು ಕಾಣಿಸುತ್ತದೆ.
ಇಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಕೇರಳ ಪೊಲೀಸರು ಸ್ಪಷ್ಟ ಪಡಿಸಿದ್ಧಾರೆ. ಅತ್ತ ಪಿಎಫ್ಐ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಬಷೀರ್ ಅವರನ್ನು ಸಂಪರ್ಕಿಸಿದಾಗ, “ಇದು ಮುಸ್ಲಿಂ ಸಂಘಟನೆಯನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುವ ಯತ್ನ, ಇದು ಸಂಪೂರ್ಣ ಸುಳ್ಳು'' ಎಂದು ಹೇಳುತ್ತಾರೆ. ಮೂಲ ಮಲಯಾಳಂನಲ್ಲಿ ಬಂದ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನೂ ಅವರು ಶೇರ್ ಮಾಡಿದ್ದಾರೆ. ಅದರಲ್ಲಿ ಹೀಗೆ ಬರೆಯಲಾಗಿದೆ. “ಎಸ್ಡಿಪಿಐನ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ, ಎರಡು ಕೊಠಡಿ ತುಂಬಾ ತಲವಾರು ನೋಡಿ ಪೊಲೀಸರಿಗೆ ಆಘಾತವಾಗಿದೆ. ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುವುದು,'' ಎಂದು ಅದರಲ್ಲಿ ಬರೆಯಲಾಗಿತ್ತು.
‘ಇಂಡಿಯಾ ಟುಡೆ’ ವೈರಲ್ ಟೆಸ್ಟ್ ತಂಡ ಈ ಬಗ್ಗೆ ಇನ್ನಷ್ಟು ಶೋಧಿಸಿದಾಗ ಆ ಫೋಟೋವನ್ನು ಪಂಜಾಬ್ ರಾಜ್ಯದ ಪಟಿಯಾಲದಲ್ಲಿರುವ ಖಲ್ಸಾ ಕಿರ್ಪನ್ ಎಂಬ ಸಿಖ್ ಕತ್ತಿ ಫ್ಯಾಕ್ಟರಿಯಿಂದ ತೆಗೆಯಲಾಗಿತ್ತೆಂದು ತಿಳಿದು ಬಂದಿದೆ. ಅದರ ಮಾಲಕ ಬಚನ್ ಸಿಂಗ್ ಕೂಡ ಇದನ್ನು ದೃಢಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಫ್ಯಾಕ್ಟರಿಗೆ ಆಗಮಿಸಿದ್ದ ಪ್ರವಾಸಿಗರ ತಂಡ ಈ ಫೋಟೋ ತೆಗೆದಿರಬೇಕೆಂದು ಅವರು ಹೇಳುತ್ತಾರೆ.
ಕೃಪೆ:vbnewsonline