ಹೊನ್ನಾವರ - ರಾಜ್ಯದಲ್ಲಿ ಮಹಿಳೆಯರ ಮೇಲೆ ದಿನನಿತ್ಯ ಆತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ತಕ್ಷಣ ಅವುಗಳಿಗೆ ಕಡಿವಾಣ ಹಾಕುವಂತೆ ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಹೊನ್ನಾವರ ತಹಶೀಲ್ದಾರ ಕಛೇರಿಯ ಎದುರು ಸಾಂಕೇತಿಕವಾಗಿ ಪ್ರತಿಭಟಿಸಿ ತಹಶೀಲ್ದಾರ ನಾಗರಾಜ್ ನಾಯ್ಕ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯಾದ್ಯಂತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಮಹಿಳೆಯರು ಮಕ್ಕಳು ಧೈರ್ಯದಿಂದ ತಿರುಗಾಡುವ ಸ್ಥಿತಿ ಇಲ್ಲದಂತಾಗಿದೆ. ಇತ್ತೀಚಿಗೆ ಮೈಸೂರಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವೇ ಇದಕ್ಕೆ ಸಾಕ್ಷಿ. ಅತ್ಯಾಚಾರವೆಸಗಿದ ಐದು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರೂ, ಮುಖ್ಯ ಆರೋಪಿಗಳಿಬ್ಬರನ್ನು ಇದುವರೆಗೂ ಬಂದಿಸದ ಕಾರಣ, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರ ಉಡಾಪೆಯ ಮಾತುಗಳನ್ನಾಡುತ್ತಿದ್ದು, ಮಹಿಳೆಯರು ರಾತ್ರಿ ವೇಳೆ ಏಕೆ ತಿರುಗಾಡಬೇಕು ಅಂತಾ ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಸರಕಾರದ ಅನೇಕ ಮಂತ್ರಿಗಳು ಮಹಿಳೆಯರ ಬಗ್ಗೆ ನಿರ್ಲಕ್ಷ ಭಾವನೆ ಹೊಂದಿದ್ದು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾರಣ ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಅತ್ಯಾಚಾರದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಾನೂನಿನಂತೆ ಶಿಕ್ಷೆ ವಿಧಿಸಬೇಕು ಮತ್ತು ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಸರಕಾರಕ್ಕೆ ಆದೇಶಿಸುವಂತೆ ವಿನಂತಿಸಿದ್ದಾರೆ.
ರಾಜ್ಯದಲ್ಲಿ ಇದೇ ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಆತ್ಯಾಚಾರ ಮುಂದುವರೆದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಎಚ್ಚರಿಸಲಾಗಿದೆ. ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೇಸ್ ಮುಂಖಂಡರಾದ ಮಮತಾ ಶೇಟ್, ನಾಗವೇಣಿ ಗೌಡ, ಸೀಮಾ ಡೊಂಗ್ರಿ ಜರಾಸಿಯಾ, ಲಕ್ಷ್ಮಿ ನವಿಗೋಣ, ಪರಿನಾ ಶಾ, ಸಾವಿತ್ರಿ ಸ್ವಾಮಿ, ಶೋಭಾ ನಾಯ್ಕ, ನೀಲಾ ಹರಿಕಾಂತ, ಸೇವಂತಿ ಪಟಗಾರ, ಜ್ಯೋತಿ ಪಟಗಾರ, ಶ್ಯಾಮಲಾ ಗೌಡ, ನೂತನ ಪಂಡಿತ, ರಾಧ ಹರಿಕಾಂತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.