ಭಟ್ಕಳ: ತಾಲೂಕಿನ ಶಿರಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ ಮಾರಾಟ ಅವ್ಯಾಹತವಾಗಿ ನಡೆದಿದ್ದು ಇದರಿಂದಾಗಿ ಗ್ರಾಮೀಣ ಭಾಗದ ಯುವಕರು ಹಾಗೂ ಹಲವು ಕುಟುಂಬಗಳು ಬಲಿಯಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಮಣ್ಣುಹೊಂಡ ಗ್ರಾಮದ ಸಾರ್ವಜನಿಕರು ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಹಾಗೂ ಅಬಕಾರಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿದ್ದಾರೆ.
ಶಿರಾಲಿ ಗ್ರಾ.ಪಂ ವ್ಯಾಪ್ತಿಯ ಮಣ್ಣುಹೊಂಡ ಗ್ರಾಮದ 5 ಅಂಗಡಿಗಳಲ್ಲಿ ಸರಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದು ಇದರಿಂದಾಗಿ ಹಲವು ಕುಟುಂಬಗಳು ಬೀದಿಪಾಲಾಗಿದ್ದು ಮಹಿಳೆಯರೂ ಮನೆಗಳಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಈ ಕುರಿತಂತೆ ಗ್ರಾಮಸ್ಥರು ಸಭೆಯೊಂದನ್ನು ಮಾಡಿ ಸಾರಾಯಿ ಮಾರಾಟದ ವಿರುದ್ಧ ನಿರ್ಣಯವನ್ನು ಕೈಗೊಂಡಿದ್ದು ಇದನ್ನು ಮಾರಾಟಗಾರರಿಗೆ ಮನವರಿಕೆ ಮಾಡಿದ್ದಾಗ್ಯೂ ಸರಾಯಿ ವ್ಯಾಪಾರ ನಿಂತುಕೊಂಡಿಲ್ಲ. ಆದ್ದರಿಂದ ತಾಲೂಕಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸುವುದರ ಮೂಲಕ ಅಕ್ರಮ ಸರಾಯಿ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೃಷ್ಣ ನಾಯ್ಕ, ಬಿಳಿಯಾ ನಾಯ್ಕ, ದಿನೇಶ್ ನಾಯ್ಕ, ತಿಮ್ಮಯ್ಯ ನಾಯ್ಕೆ, ಗಣೇಶ ನಾಯ್ಕ ಲೋಕೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.