ಭಟ್ಕಳ: ಕಳೆದ ಹಲವಾರು ವರ್ಷಗಳಿಂದ ದೇಶದಲ್ಲಿ ಅಸಹನೆ, ಅಶಾಂತಿಗೆ ಕಾರಣವಾಗಿದ್ದ ವಿವಾದಿತ ರಾಮ ಜನ್ಮಭೂಮಿ ಬಾಬರಿ ಮಸೀದಿ ಪ್ರಕರಣದ ಅಚಿತಿಮ ತೀರ್ಪು ನೆ.೧೭ ರ ಒಳಗೆ ಹೊರಬೀಳುತ್ತಿದ್ದು ಈ ತೀರ್ಪಿನ ನಂತರ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕೆಂದು ನಾಗರೀಕ ಹಕ್ಕುಗಳ ಸಂರಕ್ಷಣ ಸಂಸ್ಥೆ(ಎಪಿಸಿಆರ್) ಜಿಲ್ಲಾಸಮಿತಿ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಎಂ.ಆರ್.ಮಾನ್ವಿ, ಸರ್ವೋಚ್ಛ ನ್ಯಾಯಾಲಯದ ತೀರ್ಪು ದೇಶದ ಹಿತಾಸಕ್ತಿಗೆ ಅನುಗುಣವಾಗಿ ಹೊರಬೀಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಎಪಿಸಿಆರ್ ದೇಶದ ೧೮ ರಾಜ್ಯಗಳಲ್ಲಿ ಶೋಷಿತ,ಮರ್ಧಿತ ವರ್ಗಕ್ಕೆ ಕಾನೂನು ನೆರವು ಹಾಗೂ ಮಾರ್ಗದರ್ಶನ ನೀಡುತ್ತ ಬಂದಿದ್ದು ದೇಶದಲ್ಲಿ ಅನ್ಯಾಯ, ಅಕ್ರಮಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುತ್ತಿದೆ, ಅನ್ಯಾಯ ಹಾಗೂ ಬಲವಂತದ ಕಾನೂನು ವಿರುದ್ಧ ಇದು ದೇಶದ್ಯಾಂತ ಪರಿಣಾಮಕಾರಿ ದ್ವನಿ ಎತ್ತುತ್ತಿದೆ. ಬಾಬರಿ ಮಸೀದಿ ತೀರ್ಪಿನ ನಂತರ ಕೆಲ ದೇಶದ್ರೋಹಿಗಳು ಇಲ್ಲಿನ ಶಾಂತಿ, ಸೌಹಾರ್ದತೆಯನ್ನು ಹಾಳುಮಾಡುವರೆಂಬ ಅನುಮಾನಗಳಿದ್ದ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಅವರು ಆಗ್ರಹಿಸಿದರು.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ಗಳಲ್ಲೂ ಸಮಾಜ ಘಾತುಕ ಶಕ್ತಿಗಳು ಗಾಳಿ ಸುದ್ದಿಗಳನ್ನು ಹರಿಬಿಟ್ಟು, ಸಮಾಜದ ಸ್ವಾಸ್ಥ÷್ಯವನ್ನು ಕೆಡಿಸುವ ಪ್ರಯತ್ನ ಮಾಡಬಹುದು. ಇಂಥ ವ್ಯಕ್ತಿಗಳ ಮೇಲೆ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಬೇಕು. ಆ ಮೂಲಕ ಪರಸ್ಪರ ಗೊಂದಲ, ಗಲಭೆ ಹಾಗೂ ಕಲಹಗಳಿಗೆ ಆಸ್ಪದ ನೀಡದೆ ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.
‘ತೀರ್ಪಿನ ನಂತರ ನಾಲ್ಕೈದು ದಿನಗಳ ಕಾಲ ವಾಟ್ಸಪ್ ಅನ್ನು ಸ್ಥಗಿತಗೊಳಿಸಬೇಕು. ಫೇಸ್ಬುಕ್ ಖಾತೆಗಳ ಮೇಲೆ ನಿಗಾ ಇಡಬೇಕು. ಸಮಾಜ ಘಾತುಕ ಶಕ್ತಿಗಳ ಮೇಲೆ ನಿಯಂತ್ರಣ ಹೇರಬೇಕು. ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು. ಸಮಾಜದ ಎಲ್ಲ ಧರ್ಮದ ಮುಖಂಡರ ಜತೆ ಶಾಂತಿ ಸಭೆಗಳನ್ನು ಆಯೋಜಿಸಬೇಕು’ ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸಂಚಾಲಕ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ, ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಮಷಾಯಿಖ್, ರಾಜ್ಯಸಮಿತಿ ಸದಸ್ಯ ಇನಾಯತುಲ್ಲಾ ಗವಾಯಿ, ಸನಾವುಲ್ಲಾ ಅಸಾದಿ, ಅಬ್ದುಲ್ ಜಬ್ಬಾರ್ ಅಸಾದಿ ನ್ಯಾಯವಾದಿ ತಮೀಮ್, ನಜೀರ್ ಕಾಶಿಂಜಿ, ಯಾಹ್ಯಾ ಹಲ್ಲಾರೆ ಮುಂದಾವರು ಹಾಜರಿದ್ದರು.