ಭಟ್ಕಳ ಅಂಜುಮನ್ ಮಹಾವಿದ್ಯಾಲಯದಲ್ಲಿ ವಾರ್ಷೀಕೋತ್ಸವ ಸಮಾರಂಭ
ಭಟ್ಕಳ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಟ್ಕಳದ ಜನತೆ ವಿದ್ಯಾಭ್ಯಾಸದ ಕುರಿತು ಚಿಂತನೆ ಮಾಡಿ ಈ ಸಂಸ್ಥೆಯನ್ನು ಕಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕ್ರಿಮಿನಾಲಜಿ ಹಾಗೂ ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಜಸ್ಟಿಸ್ ವಿಭಾಗದ ಮುಖ್ಯಸ್ಥ ಡಾ. ರಿಯಾಜ್ ಅಹಮ್ಮದ್ ಮನಗೂಳಿ ಹೇಳಿದರು.
ಅವರು ಇಲ್ಲಿನ ಅಂಜುಮಾನ್ ಆಟ್ರ್ಸ, ಸೈಯನ್ಸ್, ಕಾಮರ್ಸ ಕಾಲೇಜ್ ಹಾಗೂ ರಿಸರ್ಚ ಸೆಂಟರ್ನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ವಿದ್ಯೆಯು ಒಂದು ತ್ರಿಕೋನ ಕಲಿಕೆಯಾಗಿದ್ದು ತ್ರಿಕೋನದ ಒಂದು ಮಗ್ಗಲು ಪಾಲಕರಾದರೆ ಉಳಿದೆರಡು ಮಗ್ಗಲುಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ. ಈ ಮೂರರಲ್ಲಿ ಒಂದು ಕಡೆಯಲ್ಲಿ ದಾರಿ ತಪ್ಪಿದರೂ ಕೂಡಾ ನಿಮ್ಮ ವಿದ್ಯಾರ್ಜನೆಯ ಪದ್ಧತಿಯೇ ಮುರಿದು ಬೀಳುವುದಲ್ಲದೇ ನಿಮ್ಮ ಕಲಿಕೆಯು ಅಲ್ಲಿಗೇ ಮುಗಿಯುತ್ತದೆ. ಮನೆಯೇ ಮೊದಲ ಪಾಠಶಾಲೆಯಾಗುವುದು. ಒಂದು ಮಗುವು ಹುಟ್ಟಿದ ತಕ್ಷಣ ತಾಯಿಯೇ ಮೊದಲ ಗುರುವಾಗುತ್ತಾಳೆ. ತಮ್ಮ ಮಗುವು ಸ್ವಲ್ಪ ದೊಡ್ಡದಾಗಿ ಪ್ರಾಥಮಿಕ ಕಲಿಕೆಗೆ ಆರಂಭಿಸುವಾಗಲೇ ಪಾಲಕರು ಮಗುವಿನ ಕಲಿಕೆಯ ಕುರಿತು ಕಾಳಜಿ ವಹಿಸಬೇಕು. ಮುಂದಿನ ಪ್ರತಿ ಹಂತದಲ್ಲಿಯೂ ಕೂಡಾ ಪಾಲಕರ ಜವಾಬ್ದಾರಿ ತುಂಬಾ ಇರುತ್ತದೆ. ಪಾಲಕರು ತಮ್ಮ ಮಕ್ಕಳು ಕಾಲೇಜಿಗೆ ಹೋಗುವಾಗ ಅತ್ಯಂತ ಕಾಳಜಿ ವಹಿಸಬೇಕಾಗುತ್ತದೆ.
ಅಂಜುಮಾನ್ ಉಪಾಧ್ಯಕ್ಷ ಎಸ್.ಎಂ. ಸೈಯದ್ ಅಬ್ದುರ್ ರೆಹಮಾನ್ ಬಾತಿನ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು.
ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಎ.ಎಂ.ಮುಲ್ಲಾ ಮಾತನಾಡಿ ವಿದ್ಯಾರ್ಥಿಗಳು ತಮಗೆ ತಾವೇ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಅವುಗಳೆಂದರೆ ನಾನು ಯಾವುದೇ ಸರಕಾರಿ, ಖಾಸಗೀ, ಮಲ್ಟಿ ನ್ಯಾಶನಲ್ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಲು ಸಮರ್ಥನೇ ಎಂದರು. ಅಥವಾ ನಾನು ಸ್ವಂತ ಉದ್ಯೋಗ, ಕಂಪೆನಿಯನ್ನು ನಡೆಸಬಲ್ಲನೇ ಎಂದು ಅಲ್ಲದೇ ನಾನು ವಿದ್ಯಾಭ್ಯಾಸವನ್ನು ಮುಂದುವರಿಸಲು ಅರ್ಹನಿದ್ದೇನೆಯೇ ಎಂದು, ಹಾಗೂ ನಾನು ಸ್ಪರ್ಧೆಯನ್ನು ಎದುರಿಸಬಲ್ಲನೇ ಎಂದು. ನೀವು ದೇಶದ ಭವಿಷ್ಯ ನಿರ್ಮಾಣ ಮಾಡುವವರಾಗಿದ್ದೀರಿ. ನೀವು ಅತ್ಯಂತ ಶೃದ್ಧೆಯಿಂದ ಅಭ್ಯಾಸ ಮಾಡಬೇಕಾಗಿದೆ. ನೀವು ಮೊಬೈಲ್ ಹೆಚ್ಚಾಗಿ ಬಳಸದೇ ಅದನ್ನು ವಿಷಯ ಸಂಗ್ರಹ ಮಾಡಲು ಬಳಸಿಕೊಳ್ಳಲು ಕರೆ ನೀಡಿದರು.
ವೇದಿಕೆಯಲ್ಲಿ ಅಂಜುಮಾನ್ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ಇಸ್ಮಾಯಿಲ್, ಹೆಚ್ಚುವರಿ ಕಾರ್ಯದರ್ಶಿ ಇಷಾಕ್ ಶಾಬಂದ್ರಿ, ಕಾಲೇಜು ಕಾರ್ಯದರ್ಶಿ ಮೊಹಸಿನ್ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.
ಅಫ್ಜಲ್ ಜಮಾದಾರ್ ಸ್ವಾಗತಿಸಿದರು. ಪ್ರಾಂಶುಪಾಲ ಎಂ.ಕೆ. ಶೇಖ್ ವರದಿ ವಾಚಿಸಿದರು. ಮೊಹಮ್ಮದ್ ಸಾದ್ ಕೋಲ ವಂದಿಸಿದರು.