ನವದೆಹಲಿ: ಸರ್ವೊಚ್ಚ ನ್ಯಾಯಾಲಯದಿಂದ ದಶಕಗಳಿಂದ ಜನರ ನಿದ್ದೆಗೆಡಿಸಿದ್ದ ಬಾಬರಿ ಮಸೀದಿ ಆಸ್ತಿ ಹಕ್ಕು ತೀರ್ಪು ಹೊರಬಿದ್ದಿದ್ದು ನ್ಯಾಯಾಲಯವು ಸರಕಾರಕ್ಕೆ ಮೂರು ತಿಂಗಳಲ್ಲಿ ಟ್ರಸ್ಟ್ ರಚಿಸಿ ಅದಕ್ಕೆ ಅಯೋಧ್ಯೆಯ ವಿವಾದಿತ 2.77 ಎಕರೆ ಜಾಗವನ್ನು ಕೊಡಬೇಕು. ಮತ್ತು ಸರಕಾರ ಅಲ್ಲಿ ಮಂದಿರ ನಿರ್ಮಾಣ ಮಾಡಬೇಕೆಂದು ಮಹತ್ವದ ಆದೇಶ ನೀಡಿದೆ.ಮಾಲಿಕತ್ವ ರಾಮಲಲ್ಲನಿಗೆ ಸಲ್ಲುತ್ತದೆ ಎಂದು ಹೇಳಿದೆ.
ಅದರೊಂದಿಗೆ ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲೇ ಸೂಕ್ತ ಐದು ಎಕರೆ ಪರ್ಯಾಯ ಜಾಗವನ್ನು ನೀಡಬೇಕೆಂದು ನ್ಯಾ. ರಂಜನ್ ಗೋಗಯ್ ನೇತೃತ್ವದ ಐದು ಜನರ ನ್ಯಾಯಪೀಠ ಆದೇಶಿಸಿದೆ.
ಈ ಮುಂಚೆ ನಿರ್ಮೊಹಿ ಅಖಾಡ ಮತ್ತು ಶಿಯಾ ವಕ್ಫ್ ಬೋರ್ಡಿನ ಅರ್ಜಿಯನ್ನು ವಜಾಗೊಳಿಸಿ ಸರ್ವೊಚ್ಚ ನ್ಯಾಯಾಲಯ ಆದೇಶ ನೀಡಿದೆ. ಅದರೊಂದಿಗೆ ನಿರ್ಮೋಹಿ ಅಖಾಡಕ್ಕೆ ಟ್ರಸ್ಟ್ ನಲ್ಲಿ ಸ್ಥಾನ ನೀಡುವ ಬಗ್ಗೆ ಸರಕಾರಕ್ಕೆ ನಿರ್ದೇಶನ ನೀಡಿದೆ.
ಈ ಆದೇಶ ನೀಡುವ ಮುನ್ನ ಹಲವಾರು ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು ಬಾಬರಿ ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಾಣವಾಗಿರಲಿಲ್ಲ ಎಂಬ ಅಂಶವನ್ನು ಎತ್ತಿ ಹಿಡಿದಿತ್ತು. ಮಸೀದಿಯ ಅಡಿಪಾಯದ ಕೆಳಗೆ ವಿಶಾಲ ರಚನೆಯಿತ್ತು. ಉತ್ಖನದ ಸಂದರ್ಭದಲ್ಲಿ ಅದು ಮುಸ್ಲಿಮ್ ರಚನೆಯಾಗಿರಲಿಲ್ಲ ಎಂಬ ಅಂಶ ಕೂಡ ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ತೀರ್ಪಿಗಾಗಿ ಪುರಾತತ್ವ ಇಲಾಖೆಯ ಸಾಕ್ಷ್ಯವನ್ನು ಪರಿಗಣಿಸಲಾಗಿದೆಯೆಂದು ಸರ್ವೊಚ್ಚ ನ್ಯಾಯಾಲಯ ತಿಳಿಸಿದೆ.
ಅದರೊಂದಿಗೆ 1949 ರಲ್ಲಿ ಮಸೀದಿಯಲ್ಲಿ ಮೂರ್ತಿ ತಂದು ಇಟ್ಟಿದ್ದು ಕಾನೂನು ಬಾಹಿರ ಮತ್ತು ಮಸೀದಿಯ ಧ್ವಂಸ ನಡೆಸಿದ್ದು ಕೂಡ ಕಾನೂನಿನ ಉಲ್ಲಂಘನೆಯೆಂದು ಸರ್ವೊಚ್ಚ ನ್ಯಾಯಾಲಯ ತಿಳಿಸಿದೆ.