ಭಟ್ಕಳ: " ಪ್ರಪಂಚದಲ್ಲಿ ಅವಕಾಶಗಳು ನಾವು ಉಪಯೋಗಿಸಿಕೊಂಡಷ್ಟಿದೆ" ಎಂದು ಜ್ನಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನರಸಿಂಹಮೂರ್ತಿ ಹೇಳಿದರು. ನಗರದ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು "ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸರ್ವತೋಮುಖ ಪ್ರಗತಿ ಸಾಧಿಸಬೇಕು" ಎಂದು ಕರೆನೀಡಿದರು.
ಕಾರ್ಯಕ್ರಮದ ಇನ್ನೋರ್ವ ಅಥಿತಿ ಜನ್ಪ್ಯಾಟ್ ಸಂಸ್ಥೆಯ ಟೀಮ್ ಲೀಡರ್ ನರೇಶ್ ಪೈ ಮಾತನಾಡಿ " ನಾವು ದುಡಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ದಾನದ ರೂಪದಲ್ಲಿ ಗ್ರಾಮೀಣ ಅಭಿವೃದ್ಧಿಗೆ ವಿನಿಯೋಗಿಸಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ, ಇದರಿಂದ ಗಾಂಧೀಜಿಯವರ ಸರ್ವೋದಯದ ಕನಸನ್ನು ನನಸು ಮಾಡಲು ಪ್ರಯತ್ನಿಸಿದಂತಾಗುತ್ತದೆ" ಎಂದರು.
ಭಟ್ಕಳ ಎಜುಕೇಶನ್ ಟ್ರಸ್ಟ್ನ ಅದ್ಯಕ್ಷ ಡಾ.ಸುರೇಶ್ ವಿ. ನಾಯಕ್ ಅದ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ನಾಗೇಶ್ ಎಮ್ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು,
ಶೈಕ್ಷಣಿಕ ಸಂಯೋಜಕ ಫಣಿಯಪ್ಪಯ್ಯ ಹೆಬ್ಬಾರ್ ವಾರ್ಷಿಕ ವರದಿ ಮಂಡಿಸಿದರು. ಶೈಕ್ಷಣಿಕ ತಜ್ಞ ಬಿ.ಆರ್.ಕೆ ಮೂರ್ತಿ, ಗುರು ಸುಧೀಂದ್ರ ಬಿ.ಸಿ.ಎ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಉಪಸ್ಥಿತರಿದ್ದರು, ಉಪನ್ಯಾಸಕ ವಿಶ್ವನಾಥ್ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ದೇವೇಂದ್ರ ಕಿಣಿ ಸ್ವಾಗತಿಸಿದರು, ವೈಭವ್ ನಾಯ್ಕ್, ಅರ್ಚನಾ ಹೆಬ್ಬಾರ್ ನಿರೂಪಿಸಿದರು, ಮತ್ತು ಉಪನ್ಯಾಸಕಿ ವಂದನಾ ಡಿಸೋಜ ವಂದಿಸಿದರು.