ಭಟ್ಕಳ: ಕೈ ಕೊಟ್ಟ ಕರೆಂಟ್: ಹೆಸ್ಕಾಂ ಕಚೇರಿಗೆ ಮುತ್ತಿಗೆ
ಭಟ್ಕಳ: ಈದ್ ಉಲ್ ಫಿತ್ರ್ರ್ ಹಬ್ಬದ ಸಂಭ್ರಮದಲ್ಲಿದ್ದ ಇಲ್ಲಿನ ಮುಸ್ಲೀಮರು ನಿರಂತರವಾಗಿ ಕರೆಂಟ್ ಕೈ ಕೊಟ್ಟ ಕಾರಣ ಆಕ್ರೋಶಿತಗೊಂಡು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಬುಧವಾರ ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಹೆಸ್ಕಾಂ ಕಚೇರಿಗೆ ತೆರಳಿದ ನೂರಾರು ಜನರು, ಹೆಸ್ಕಾಂ ಇಲಾಖೆಯ ವಿರುದ್ಧ ಆರೋಪಗಳ ಸುರಿಮಳೆಗರೆದರು. ಕಳೆದ 2 ದಿನಗಳಿಂದ ಜನರು ರಾತ್ರಿ ವಿದ್ಯುತ್ ಇಲ್ಲದೇ ಸಂಕಷ್ಟ ಪಡುತ್ತಿದ್ದಾರೆ. ತಾಂತ್ರಿಕ ದೋಷದಿಂದ ವಿದ್ಯುತ್ ಇಲ್ಲ ಎನ್ನುವುದು ಕೇವಲ ಸಬೂಬು ಆಗಿದೆ. ಪ್ರತಿ ಬಾರಿಯೂ ಮುಸ್ಲೀಮರ ಹಬ್ಬದ ಸಂದರ್ಭದಲ್ಲಿಯೇ ಒಂದೆರಡು ದಿನಗಳ ಕಾಲ ವಿದ್ಯುತ್ನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಇದರ ಹಿಂದೆ ಕುತಂತ್ರ ಅಡಗಿದೆ ಎಂದು ಆಪಾದಿಸಿದರು. ಕುಮಟಾ 110ಕೆವಿ ಘಟಕದಲ್ಲಿನ ಸಮಸ್ಯೆಯ ಬಗ್ಗೆ ಹೆಸ್ಕಾಂ ಅಧಿಕಾರಿಗಳು ವಿವರಿಸಿದರೂ ಪ್ರತಿಭಟನಾಕಾರರ ಸಿಟ್ಟು ತಣ್ಣಗಾಗಲಿಲ್ಲ.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಎನ್.ಬಿ.ಪಾಟೀಲ್, ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಇನಾಯಿತುಲ್ಲಾ ಶಾಬಂದ್ರಿ, ಅಬ್ದುರ್ರಕೀಬ್ ಎಮ್.ಜೆ. ಸ್ಥಳಕ್ಕೆ ದೌಡಾಯಿಸಿ ಆಕ್ರೋಶಿತರನ್ನು ಸಮಾಧಾನಪಡಿಸುವ ಯತ್ನ ನಡೆಸಿದರು. ಡಿವಾಯ್ಎಸ್ಪಿ ವೆಲೈಂಟೈನ್ ಡಿಸೋಜಾ ಉಪಸ್ಥಿತರಿದ್ದರು.