ಚಳ್ಳಕೆರೆ: ನಗರಸಭೆಯಿಂದ ಶನಿವಾರ ನಗರದಲ್ಲಿ ಇರುವ ಹಂದಿಗಳನ್ನು ಹಿಡಿದು ಹೊರ ಸಾಗಿಸುತ್ತಿದ್ದ ವೇಳೆ ಹಂದಿ ಮಾಲೀಕರು ಮತ್ತು ನಗರಸಭಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.
ಹಂದಿಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಟೆಂಪೋಗೆ ಅಡ್ಡಲಾಗಿ ನಿಂತುಕೊಂಡ ಹಂದಿ ಸಾಕಾಣಿಕೆದಾರರು, ಹಂದಿಗಳನ್ನು ಮಾರಾಟ ಮಾಡಿ ಬಂದ ಹಣ ನಮಗೆ ಕೊಡಬೇಕು ಎಂದು ಹಂದಿ ಸಾಕಾಣಿಕೆದಾರರಾದ ಸುಂಕಪ್ಪ, ನಾಗರಾಜ, ಹೊನ್ನೂರು ಸ್ವಾಮಿ, ಮಲ್ಲೇಶಿ, ತಮ್ಮಣ್ಣ ಪಟ್ಟುಹಿಡಿದರು.
ಸ್ಥಳೀಯ ಆಡಳಿತದಿಂದ ಊರ ಹೊರಭಾಗದಲ್ಲಿ ಜಾಗ ತೋರಿಸಬೇಕು. ಗೂಡುಗಳನ್ನು ಕಟ್ಟಿಕೊಂಡು ನಗರದ ಹೊರಭಾಗದಲ್ಲಿ ಹಂದಿಗಳನ್ನು ಸಾಕಾಣಿಕೆ ಮಾಡಿಕೊಳ್ಳುತ್ತೇವೆ. ಕರೊನಾ ಸಮಸ್ಯೆಯಿಂದ ಹಂದಿಗಳನ್ನು ಹೊರ ಸಾಗಿಸಲು ತಿಳಿಸಲಾಗಿತ್ತು.
ಸ್ವಲ್ಪ ಹಂದಿಗಳನ್ನು ಹಿಡಿದು ಬೇರೆ ಕಡೆ ಬಿಟ್ಟು ಬರಲಾಗಿತ್ತು. ಗಾಬರಿಯಾಗಿದ್ದ ಹಂದಿಗಳನ್ನು ಮತ್ತೆ ಹಿಡಿಯಲು ಸ್ವಲ್ಪ ಸಮಯಬೇಕೆಂದು ಕೇಳಿಕೊಂಡಿದ್ದರೂ 20 ದಿನಗಳ ಹಿಂದೆ 150 ಹಂದಿಗಳನ್ನು ನಗರಸಭಾ ಸಿಬ್ಬಂದಿ ಹೊರ ಸಾಗಿಸಿ ಮಾರಿಕೊಂಡಿದ್ದಾರೆ ಎಂದು ದೂರಿದರು.
ಇವುಗಳ ಹಣವನ್ನು ಕೊಡಿಸುವ ಕೆಲಸ ಆಗಬೇಕು ಎಂದು ಸಾಕಾಣಿಕೆದಾರರು ಆಗ್ರಹಿಸಿದರು.
ಕೋವಿಡ್-19 ಪರಿಣಾಮ ನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹಂದಿಗಳನ್ನು ಹೊರಸಾಗಿಸುವ ಸಂಬಂಧ ಸಾಕಾಣಿಕೆದಾರರ ಸಭೆ ನಡೆಸಲಾಗಿತ್ತು. ಮೂರು ಬಾರಿ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಂಡಿರಲಿಲ್ಲ. ಆದ್ದರಿಂದ ಹಂದಿ ಹಿಡಿಯುವವರನ್ನು ಕರೆಸಿ ನಗರದಿಂದ ಹೊರ ಸಾಗಿಸಲಾಗಿದೆ.
ಮಹಾಲಿಂಗಪ್ಪ ಆರೋಗ್ಯ ನಿರೀಕ್ಷಕ