6 ಪ್ರಕರಣಗಳಲ್ಲೂ ಝುಬೈರ್ಗೆ ಜಾಮೀನು; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ದಾಖಲಿಸಲಾಗಿರುವ ಎಲ್ಲಾ 6 ಪ್ರಕರಣಗಳಲ್ಲಿ ಆಲ್ಟ್ ನ್ಯೂಸ್ ಪತ್ರಕರ್ತ ಮುಹಮ್ಮದ್ ಝುಬೈರ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎ.ಎಸ್. ಬೋಪಣ್ಣ ಅವರನು ಒಳಗೊಂಡ ಪೀಠ ಝುಬೈರ್ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಝುಬೈರ್ ವಿರುದ್ಧ ಸೀತಾಪುರ, ಲಖಂಪುರ ಖೇರಿ, ಮುಝರ್ನಗರ ಹಾಗೂ ಗಾಝಿಯಾಬಾದ್ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಹಾಗೂ ಹಾಥರಸ್ನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಟಿ.ವಿ. ಸುದ್ದಿ ನಿರೂಪಕನ ಕುರಿತು ವಿಡಂಬನಾತ್ಮಕ ಹೇಳಿಕೆ ನೀಡಿರುವುದು, ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಹಿಂದೂ ದೇವರ ಬಗ್ಗೆ ಪ್ರಚೋದನಾಕಾರಿ ಅಂಶಗಳನ್ನು ಪೋಸ್ಟ್ ಮಾಡಿದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳು ಇದಾಗಿವೆ.
ಹೊಸದಿಲ್ಲಿಯಲ್ಲಿ ದಾಖಲಿಸಲಾದ 7ನೇ ಪ್ರಕರಣದಲ್ಲಿ ನ್ಯಾಯಾಲಯ ಮುಹಮ್ಮದ್ ಝುಬೈರ್ ಅವರಿಗೆ ಈಗಾಗಲೇ ಜಾಮೀನು ನೀಡಿದೆ.
ಝುಬೈರ್ ಅವರನ್ನು ಕಸ್ಟಡಿಯಲ್ಲೇ ಇರಿಸಲು ಅವರ ವಿರುದ್ಧ ದಾಖಲಿಸಲಾದ ಹಳೆಯ ಎಫ್ಐಆರ್ಗಳನ್ನು ಉತ್ತರಪ್ರದೇಶ ಪೊಲೀಸರು ಸಲ್ಲಿಸಿದ್ದಾರೆ ಎಂದು ಝುಬೈರ್ ಪರ ವಕೀಲ ವೃಂದಾ ಗೋವರ್ ಬುಧವಾರ ನಡೆದ ವಿಚಾರಣೆ ಸಂದರ್ಭ ತಿಳಿಸಿದರು.
ಈ ನಡುವೆ ಉತ್ತರಪ್ರದೇಶದ ಹೆಚ್ಚುವರಿ ಅಡ್ವಕೇಟ್ ಜನರಲ್ ಗರಿಮಾ ಪ್ರಸಾದ್, ಸತ್ಯ ಶೋಧನೆ ಹೆಸರಿನಲ್ಲಿ ಝಬೈರ್ ಅವರು ದುರುದ್ದೇಶಪೂರಿತ ಹಾಗೂ ಪ್ರಚೋದನಕಾರಿ ವಿಚಾರಗಳನ್ನು ಪ್ರಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.