ಹೊಸದಿಲ್ಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ದ್ವೇಷ ಉತ್ತೇಜನದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಸತ್ಯ ಪರಿಶೀಲನೆ ವೆಬ್ಸೈಟ್ 'ಆಲ್ಟ್ ನ್ಯೂಸ್'ನ ಸ್ಥಾಪಕರಲ್ಲೊಬ್ಬರಾದ ಪತ್ರಕರ್ತ ಮುಹಮದ್ ಝುಬೈರ್ ಅವರನ್ನು ದಿಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
'ಹನುಮಾನ್ ಭಕ್ತಿ' ಎಂದು ಕರೆಯಲಾಗುವ ಟ್ವಿಟರ್ ಹ್ಯಾಂಡಲ್ ನಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಮುಹಮ್ಮದ್ ಝುಬೈರ್ ಅವರ ಟ್ವಿಟ್ ಪೊಲೀಸರ ಗಮನಕ್ಕೆ ಬಂದಿತ್ತು. ಆನಂತರ ಪೊಲೀಸರು ಝುಬೈರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೇರೆ ಪ್ರಕರಣದಲ್ಲಿ ದಿಲ್ಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಝುಬೈರ್ ಅವರನ್ನು ಕರೆಯಲಾಗಿತ್ತು ಎಂದು 'ಆಲ್ಟ್ ನ್ಯೂಸ್' ಇನ್ನೋರ್ವ ಸ್ಥಾಪಕ ಪ್ರತೀಕ್ ಸಿನ್ಹಾ ಪ್ರತಿಪಾದಿಸಿದ್ದಾರೆ.
ಆದರೆ, ಅವರ ಬಂಧನಕ್ಕೆ ಕಡ್ಡಾಯ ನೋಟಿಸ್ ನೀಡಿರಲಿಲ್ಲ. ಮತ್ತೆ ಮತ್ತೆ ಮನವಿ ಮಾಡಿದ ಹೊರತಾಗಿಯೂ ಎಫ್ಐಆರ್ ಪ್ರತಿಯನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸ್ ಠಾಣೆಯ ವಿಶೇಷ ಘಟಕದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಝುಬೈರ್ ಭಾಗಿಯಾಗಿದ್ದರು. ಸಾಕಷ್ಟು ಪುರಾವೆಗಳು ಲಭ್ಯವಾದ ಬಳಿಕ ಅವರನ್ನು ಬಂಧಿಸಲಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಕಸ್ಟಡಿಗೆ ಕೋರಲು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಝುಬೈರ್ ಬಂಧನವನ್ನು 'ಸತ್ಯದ ಮೇಲಿನ ಹಲ್ಲೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.