ಕಾರವಾರ: ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಕಲ ಸಜ್ಜು: ನಿಷೇಧಾಜ್ಞೆ,ವ್ಯಾಪಕ ಭದ್ರತೆ

Source: S.O. News Service | By MV Bhatkal | Published on 22nd May 2019, 12:40 AM | Coastal News | Don't Miss |

ಕಾರವಾರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಏಪ್ರಿಲ್ 23ರಂದು ನಡೆದ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಡೆದು ಸರಿಯಾಗಿ ಒಂದು ತಿಂಗಳ ತರುವಾಯ ಮೇ 23ರಂದು ಜಿಲ್ಲೆಯ ಕುಮಾಟಾ ಪಟ್ಟಣದಲ್ಲಿರುವ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

16ನೇ ಲೋಕಸಭೆ ಅವಧಿ ಪೂರ್ಣಗೊಂಡು 17ನೇ ಲೋಕಸಭೆ ರಚನೆಗೆ ಮಾರ್ಚ್10ರಂದು ಭಾರತ ಚುನಾವಣಾ ಆಯೋಗ ಚುನಾವಣೆ ಘೋಷಿಸಿ ದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಸಿದೆ. ಈ ಪೈಕಿ ಕರ್ನಾಟಕ ರಾಜ್ಯದಲ್ಲಿ 2019 ಏಪ್ರಿಲ್ 18 ಮತ್ತು 23ಕ್ಕೆ ಎರಡು ಹಂತದಲ್ಲಿ ಚುನಾವಣೆಗೆ ಮಾರ್ಚ್ 28ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಏಪ್ರಿಲ್ 23ರಂದು ನಡೆದು ಮೇ 23ರಂದು ಮತ ಎಣಿಕೆ ನಡೆಯುತ್ತಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು ಜಿಲ್ಲೆಯ ಹಳಿಯಾಳ (ಶೇ.73.43), ಕಾರವಾರ (ಶೇ.72.28), ಕುಮಟಾ (ಶೇ.77.12), ಭಟ್ಕಳ(71.79), ಶಿರಸಿ(ಶೇ.78.38), ಯಲ್ಲಾಪುರ (ಶೇ.77.75)  ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ (ಶೇ.70.68) ಹಾಗೂ ಕಿತ್ತೂರು (ಶೇ.72.33) ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ. ಒಟ್ಟು 15,52,134 ಮತದಾರರಿದ್ದು 11,49,609 ಮತದಾರರು ಮತ ಚಲಾಯಿಸಿ ಕ್ಷೇತ್ರದಲ್ಲಿ ಶೇ.74.07ರಷ್ಟು ಮತದಾನವಾಗಿತ್ತು.

ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯ ಅನಂತಕುಮಾರ್ ಹೆಗಡೆ, ಜೆಡಿಎಸ್‍ನ ಆನಂದ್ ಆಸ್ನೋಟಿಕರ್, ಬಹುಜನ ಸಮಾಜ ಪಕ್ಷದ ಸುಧಾಕರ ಕೀರ ಜೋಗಳೇಕರ್, ನೋಂದಾಯಿತ ರಾಜಕೀಯ ಪಕ್ಷಗಳಾದ ರಾಷ್ಟ್ರೀಯ ಸಮಾಜ ಪಕ್ಷದ ನಾಗರಾಜ ನಾಯ್ಕ್, ರಾಷ್ಟ್ರೀಯ ಜನಸಂಭಾವನ ಪಕ್ಷದ ನಾಗರಾಜ್ ಶೇಠ್, ಭಾರತ ಭೂಮಿ ಪಕ್ಷದ ಮಂಜುನಾಥ ಸದಾಶಿವ, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಅನಿತಾ ಶೇಠ್, ಕುಂದಬಾಯಿ ಗಣಪತಿ ಪುರಲೇಕರ್, ಚಿದಾನಂದ ಹರಿಜನ, ನಾಗರಾಜ್ ಅನಂತ್ ಶಿರಾಲಿ, ಬಾಲಕೃಷ್ಣ ಪಾಟೀಲ್, ಮೊಹಮದ್ ಝಬರೂದ್ ಖತೀಬ್ ಒಟ್ಟು 13 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಚುನಾವಣೆ ಎದುರಿಸಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.

ಮತ ಎಣಿಕೆಗೆ ಸಿದ್ಧತೆ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕುಮಟಾದ ಡಾ.ಎ.ವಿ.ಬಾಳಿಗ ಕಾಲೇಜಿನಲ್ಲಿ ಮೇ 23ರಂದು ನಡೆಯಲಿದ್ದು ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ನಡೆಯಲು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಇವರ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆದಿದೆ.

ಮತ ಎಣಿಕೆಗಾಗಿ ನಿಯೋಜನೆಗೊಂಡಿರುವ 368 ಸಿಬ್ಬಂದಿ ಮತ್ತು ಇಟಿಪಿಬಿಎಸ್‍ನ 24 ಮಂದಿ ಸೇರಿ ಒಟ್ಟು 392 ಸಿಬ್ಬಂದಿಗೆ (ಡಿ ದರ್ಜೆ ನೌಕರರನ್ನು ಹೊರತುಪಡಿಸಿ) ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳಂತೆ ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಆಧಾರದಲ್ಲಿ 15ರಿಂದ ಗರಿಷ್ಠ 19 ಸುತ್ತು ಮತ ಎಣಿಕೆ ನಡೆಯಲಿದೆ. ಈವರೆಗೆ ಒಟ್ಟು 624 ಸೇವಾ ಮತಗಳು ಹಾಗೂ 2594 ಅಂಚೆ ಮತಗಳು ಸೇರಿ ಒಟ್ಟು 3218 ಅಂಚೆ ಮತಗಳು ಬಂದಿವೆ.

ಮತ ಎಣಿಕೆ ಕೇಂದ್ರದ ಸುತ್ತ ಭದ್ರತೆ:
ಮತ ಎಣಿಕೆ ನಡೆಯುತ್ತಿರುವ ಡಾ.ಎ.ವಿ.ಬಾಳಿಗ ಕಾಲೇಜಿನ ಸುತ್ತ 200 ಮೀಟರ್ ಪಾಸಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದಲ್ಲಿ ನಾಲ್ಕು ಹಂತದ ತೀವ್ರ ಭದ್ರತೆ ಇರಲಿದ್ದು ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರು, ಮತ ಎಣಿಕೆ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇವರೂ ಕೂಡ ಕಡ್ಡಾಯವಾಗಿ ಆಯೋಗದಿಂದ ನೀಡಲಾದ ಅಧಿಕೃತ ಪ್ರವೇಶ ಪತ್ರವನ್ನು ಹೊಂದಿರಬೇಕು. ರಾಜಕೀಯ ಪಕ್ಷಗಳ ಮುಖಂಡರಿಗೆ ಈಗಗಲೇ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತಿಳಿವಳಿಕೆಯನ್ನು ನೀಡಲಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಯಾವುದೇ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು ಅಧಿಕೃತ ವಾಹನಗಳು ಪೊಲೀಸ್ ಇಲಾಖೆಯಿಂದ ನೀಡುವ ಮಾರ್ಗದರ್ಶನದಂತೆ ಪ್ರವೇಶ ಪಡೆಬಹುದಾಗಿದೆ. ಉಳಿದಂತೆ ಹೆಗಡೆ ವೃತ್ತದವರೆಗೆ ಮಾತ್ರ ಪ್ರವೇಶವಿರುತ್ತದೆ. ಪೊಲೀಸ್ ಇಲಾಖೆಯ ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡದಂತೆ ಹಾಗೂ ಕಡ್ಡಾಯವಾಗಿ ಇಲಾಖೆಯಿಂದ ನೀಡಿರುವ ಪಾಸ್‍ಗಳನ್ನು ಪ್ರದರ್ಶಿಸಬೇಕಿದೆ.

ಭದ್ರತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, 3 ಡಿವೈಎಸ್‍ಪಿ, 10 ಸಿಪಿಐ, 19 ಪಿಎಸ್‍ಐ, 29 ಎಎಸ್‍ಐ, 680 ಪೊಲೀಸ್ ಸಿಬ್ಬಂದಿ, 2 ಕೆಎಸ್‍ಆರ್‍ಪಿ, 6 ಡಿಎಆರ್, 3 ಸಿಎಪಿಎಫ್ ನಿಯೋಜಿಸಲಾಗಿದೆ.

ಅಲ್ಲದೆ ಉತ್ತರ ಕನ್ನಡ ಕೋಮು ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ದಿನಾಂಕ 22-05-2019 ಮಧ್ಯರಾತ್ರಿಯಿಂದ 24-05-2019ರ ಮಧ್ಯರಾತ್ರಿವರೆಗೆ 144 ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಜಿಲ್ಲಾದ್ಯಂತ ದಿನಾಂಕ 23-05-2019 ಬೆಳಿಗ್ಗೆ 6ರಿಂದ 24-05-2019 ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ, ಮದ್ಯ ತಯಾರಿಕಾ ಘಟಕಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.

ಮೊಬೈಲ್ ನಿಷೇಧ:
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ ಎಣಿಕೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಹಾಗೂ ಮಾಧ್ಯಮ ಕೇಂದ್ರ ಪ್ರವೇಶಿಸುವ ಪತ್ರಕರ್ತರಿಗೆ ಮಾತ್ರ ಮೊಬೈಲ್‍ಗೆ ವಿನಾಯಿತಿ ಇರಲಿದೆ.

ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ವಿ. ಪಾಟೀಲ್ ಅವರು ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು. ಅಲ್ಲದೆ, ಮತ ಎಣಿಕೆಯ ತಾಲೀಮು ಕೂಡ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...