ಕೋಲಾರ: ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಮತ್ತು ಪಶು ಚಿಕಿತ್ಸಾಲಯ, ತಿಮ್ಮಸಂದ್ರ ಗ್ರಾಮ, ಕೆ.ಜಿ.ಎಫ್. ತಾಲೂಕು ಇವರ ಸಹಯೋಗದಲ್ಲಿ ತಿಮ್ಮಸಂದ್ರ ಗ್ರಾಮದಲ್ಲಿ “ಪಶು ಆರೋಗ್ಯ ಶಿಬಿರ” ವನ್ನು ದಿನಾಂಕ 04.03.2021 ರಂದು ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ತಿಮ್ಮಸಂದ್ರ ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿಗಳಾದ ಡಾ. ನಾಯ್ಕ ಮತ್ತು ಡಾ. ಪ್ರವೀಣಕುಮಾರ್ ರವರು ರಾಸುಗಳಿಗೆ ಗರ್ಭ ತಪಾಸಣೆ, ಬರಡು ರಾಸುಗಳ ಚಿಕಿತ್ಸೆ, ಪಡ್ಡೆಗಳ ಗರ್ಭಕೋಶದ ಬೆಳವಣಿಗೆಗೆ ಔಷಧಿ, ಹಾಲಿನಲ್ಲಿ ಮತ್ತು ಹಾಲಿನ ಜಿಡ್ಡಿನಾಂಶದಲ್ಲಿ ಏರಿಳಿತ ತಪಾಸಣೆ ಹಾಗೂ ಚಿಕಿತ್ಸೆ, ಕೆಚ್ಚಲು ಬಾವುಗಳಿಗೆ ಚಿಕಿತ್ಸೆ, ರಕ್ತ ಹೀರುವ ಪರೋಪ ಜೀವಿಗಳಾದ ಉಣ್ಣೆ/ ಹೇನುಗಳಿಗೆ ಔಷಧಿ ಸಿಂಪರಣೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಖಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ವಿತರಣೆ ಹಾಗೂ ಎಲ್ಲಾ ರಾಸುಗಳಿಗೆ ಜಂತು ನಾಶಕ ಔಷಧಿಯನ್ನು ನೀಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಗ್ರಾಮದಲ್ಲಿ ಇರುವ ಸುಮಾರು 250 ಹಸು ಮತ್ತು 400 ಕುರಿಗಳಿಗೆ ಜಂತು ನಾಶಕ ಔಷಧಿ ನೀಡಲಾಯಿತು. ಸುಮಾರು 20 ರಾಸುಗಳಿಗೆ ಬಂಜೆತನ ನಿವಾರಣೆ ಚಿಕಿತ್ಸೆ ಹಾಗೂ 20 ರಾಸುಗಳಿಗೆ ಹಾಲಿನಲ್ಲಿ ಕಬ್ಬಿಣಾಂಶ ಹಾಗೂ ಡಿಗ್ರಿ ತಪಾಸಣೆ ಮಾಡಲಾಗಿ ಭಾದೆಗೊಳಪಟ್ಟ ರಾಸುಗಳಿಗೆ ಲವಣ ಮಿಶ್ರಿತ ಪುಡಿಯನ್ನು ನೀಡಲಾಯಿತು. ಸುಮಾರು 50 ರಾಸುಗಳಿಗೆ ಸಾಮಾನ್ಯ ತಪಾಸಣೆ ಮತ್ತು ಇನ್ನೀತರ ಖಾಯಿಲೆಗಳಿಗೆ ಔಷಧಿ ನೀಡಲಾಯಿತು. ಚಿಕಿತ್ಸೆಯ ನಂತರ ಗ್ರಾಮಸ್ಥರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಾ. ನಾಯ್ಕ ಮತ್ತು ಡಾ. ಪ್ರವೀಣಕುಮಾರ್ರವರು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಇರುವ ಜಾನುವಾರುಗಳಿಗೆ ಮುಂಚಿತವಾಗಿ ತಪಾಸಣೆ ಮತ್ತು ಲಸಿಕೆ ಹಾಕಿಸಲು ರೈತಭಾಂದವರಿಗೆ ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಅನಿಲ ಕುಮಾರ್ ಎಸ್. ಹಾಗೂ ಡಾ. ಜ್ಯೋತಿ ಕಟ್ಟೆಗೌಡರ ಭಾಗವಹಿಸಿ ಪಶು ಚಿಕಿತ್ಸಾ ಶಿಬಿರದ ಮಹತ್ವ ಹಾಗೂ ಮೇವಿನ ಬೆಳೆಗಳ ಉತ್ಪಾದನೆ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಬೇತಮಂಗಲ ಪಶು ಚಿಕಿತ್ಸಾಲಯದ ಎಲ್ಲ ಸಿಬ್ಬಂದಿಗಳು, ತಿಮ್ಮಸಂದ್ರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಭಾಗವಹಿಸಿ ಮಾಹಿತಿ ನೀಡಿದರು ಮತ್ತು ತಿಮ್ಮಸಂದ್ರ ಹಳ್ಳಿಯ ಗ್ರಾಮಸ್ಥರು ಭಾಗವಹಿಸಿ ಪಶು ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.