ಶಿವಮೊಗ್ಗ : ಜಿಲ್ಲೆಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ, ಸ್ಥಳೀಯವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾದ ಹಾಗೂ ಇಲಾಖೆಯಲ್ಲಿನ ಜ್ವಲಂತ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸಭೆಯನ್ನು ಏರ್ಪಡಿಸಿ, ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಕೋರಿಕೆಯ ಮೇರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ನೂತನವಾಗಿ ಸೇವೆಗೆ ನಿಯುಕ್ತರಾದ ಶಿಕ್ಷಕರ ಖಾಯಂ ಪೂರ್ವ ಸೇವಾವಧಿ ತೃಪ್ತಿಕರವಾಗಿರುವ ಬಗ್ಗೆ ಆದೇಶ ಹೊರಡಿಸುವ, ಶಿಕ್ಷಕರ ಮೇಲೆ ಬಹುದಿನಗಳಿಂದ ಬಾಕಿ ಇರುವ ಇಲಾಖಾ ವಿಚಾರಣೆ ಬಾಕಿ, ನಿವೃತ್ತ ಶಿಕ್ಷಕರ ಸೌಲಭ್ಯಗಳನ್ನು ನೀಡದಿರುವುದು, ವೈದ್ಯಕೀಯ ವೆಚ್ಚದ ಮರುಪಾವತಿ, ವೇತನ ವಿಳಂಬ ಮುಂತಾದ ಸಮಸ್ಯೆಗಳು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಬಾಕಿ ಇರುವುದು ಬೇಸರ ಸಂಗತಿಯಾಗಿದೆ. ಇವುಗಳನ್ನು ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲದಂತೆ ತ್ವರಿತಗತಿಯಲ್ಲಿ ವಿಲೇ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರಲ್ಲಿ ಮನವಿ ಮಾಡಿದರು.
ಶಿಕ್ಷಕರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿದ್ದಲ್ಲಿ ಕೂಡಲೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಈ ವಿಷಯದಲ್ಲಿ ಅನಗತ್ಯ ವಿಳಂಬ ಸರಿಯಲ್ಲ. ಅಧಿಕಾರ ದುರ್ಬಳಕೆಯಂತಹ ಪ್ರಕರಣಗಳಲ್ಲಿ ನಿಯಮಾನುಸಾರ ಕ್ರಮವಹಿಸುವ ಬಗ್ಗೆ ನೌಕರರ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದವರು ನುಡಿದರು.
ಗುರುಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸರ್ಕಾರ ಅಗತ್ಯವಾಗಿರುವ ಅನುದಾನವನ್ನು ಬಿಡುಗಡೆ ಮಾಡಿದ್ದು,. ಜಿಲ್ಲಾ ಉಸ್ತುವಾರಿ ಸಚಿವರ ದಿನಾಂಕ ಪಡೆದು, ಕೂಡಲೇ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಶಿಕ್ಷಕರ ಮುಂಬಡ್ತಿಗೆ ಸಂಬಂಧಿಸಿದ ಕಡತಗಳನ್ನು ಕೂಡಲೇ ವಿಲೇ ಮಾಡುವಂತೆ ಮನವಿ ಮಾಡಿದರು.
ಜಿಲ್ಲೆಯ ಶಿಕ್ಷಕರ ಸೇವಾ ವಹಿ(ಎಸ್.ಆರ್.)ಯಲ್ಲಿ ದಾಖಲೆಗಳು ಸರಿಯಾಗದಿರುವ ಬಗ್ಗೆ ಅನೇಕ ದೂರುಗಳಿವೆ. ವೇತನ, ಭತ್ಯೆಗಳ ಪಾವತಿಗೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್.ನಲ್ಲಿ ತಾಂತ್ರಿಕ ದೋಷವಿರುವ ಬಗ್ಗೆ ಕಾರಣಗಳು ಅಧಿಕವಾಗಿವೆ. ಇವುಗಳನ್ನು ಸರಿಪಡಿಸಲು ತಾಂತ್ರಿಕ ಸಲಹೆಗಾರರ ಸಲಹೆಯನ್ನು ಪಡೆದುಕೊಳ್ಳಲು ಜಿಲ್ಲೆಯಲ್ಲಿ ಓರ್ವರಿಗೆ ಹೊಣೆಗಾರಿಕೆ ವಹಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಮುಂಬಡ್ತಿ ಮತ್ತು ಕಾಲಮಿತಿ ಬಡ್ತಿಗೆ ಸಂಬಂಧಿಸಿದ ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಆಯಾ ಶಾಲೆಗಳಲ್ಲಿನ ಬಟವಾಡೆ ಅಧಿಕಾರಿಗಳು ಅಥವಾ ಪ್ರಥಮ ದರ್ಜೆ ಸಹಾಯಕರಿಗೆ ಹೆಚ್.ಆರ್.ಎಂ.ಎಸ್.ನಿರ್ವಹಣೆ ಕುರಿತು ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ನ್ಯೂನತೆಗಳು ಮುಂದುವರೆದಲ್ಲಿ ಶಾಲೆ/ಕಚೇರಿಯ ವ್ಯವಸ್ಥಾಪಕರನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಸರ್ಕಾರ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳು ಆರಂಭಗೊಳ್ಳಲಿವೆ. ಜಿಲ್ಲೆಯ ಯಾವುದೇ ಶಾಲೆಯಲ್ಲಿ ಕೋವಿಡ್ನ ಒಂದೂ ಪ್ರಕರಣಗಳು ಗೋಚರಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಅಲ್ಲದೇ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರರು ಖರೀದಿಸಿದ್ದ ಥರ್ಮಲ್ ಸ್ಕ್ಯಾನರ್ಗಳನ್ನು ಶಾಲಾ ಮಕ್ಕಳ ದೈನಂದಿನ ತಪಾಸಣೆಗಾಗಿ ಪಡೆದುಕೊಳ್ಳುವಂv, ಹೆಚ್ಚಿನ ಅಗತ್ಯವಿದ್ದಲ್ಲಿ ಮತ್ತೊಂದನ್ನು ಖರೀದಿಸುವಂತೆ ಸೂಚಿಸಿದ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ.ಫಲಿತಾಂಶ ಮೊದಲ ಹತ್ತು ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಈಗಾಗಲೇ ಇಲಾಖೆಯು ಹೊರಸಿರುವ ಪಠ್ಯಕ್ರಮವನ್ನು ಅನುಸರಿಸುವಂತೆ ಸೂಚಿಸಿಸಿರುವುದಾಗಿ ತಿಳಿಸಿದರು.
ಈ ಪಠ್ಯ ಬೋದನೆಯನ್ನು ಪರಿಣಾಮಕಾರಿ ತಂತ್ರಗಳನ್ನು ಬಳಸಬೇಕು. ಅಗತ್ಯವೆನಿಸಿದಲ್ಲಿ ಶಿಕ್ಷಕರಿಗೆ ತರಬೇತಿಗಳನ್ನು ನೀಡಲಾಗುವುದು. ಬೋದನಾ ಕ್ರಮದಲ್ಲಿ ನಿರ್ಲಕ್ಷ ಬೇಡ. ನಡೆಯುವ ತರಗತಿಗಳು ಸಕಾಲಿಕವೂ, ವ್ಯವಸ್ಥಿತವೂ ಆಗಿರಲಿ ಎಂದ ಅವರು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ ಶ್ರವಣ, ಪಠಣ, ಓದು ಮತ್ತು ಬರಹ ಕೌಶಲ್ಯಗಳನ್ನು ತಿಳಿಸುವುದರ ಜೊತೆಗೆ ಪೂರಕ ಪಠ್ಯವನ್ನು ಬೋದಿಸುವಂತೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಅವರು ಮಾತನಾಡಿ, ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಕೊಠಡಿಗಳ ಸಂಖ್ಯೆ ಸಾಕಷ್ಟಿದ್ದರೆ, ಅಂತಹ ಶಾಲೆಗಳಲ್ಲಿ ಕೋವಿಡ್ ಸುರಕ್ಷತಾಕ್ರಮಗಳನ್ನು ಅನುಸರಿಸಿ, ನಿರಂತರವಾಗಿ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಬಿ.ಆರ್.ಬಸವರಾಜು, ನೌಕರರ ಸಂಘದ ಬೆಂಗಳೂರು ವಿಭಾಗದ ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಶಿಕ್ಷಕರ ಸಂಘದ ಎಲ್ಲಾ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.