ಮಂಗಳೂರು : ದೇಶಕ್ಕೆ ಅನ್ನ ನೀಡುವ ರೈತರ ಉಳಿವಿಗಾಗಿ,ಸಂಪತ್ತನ್ನು ಸ್ರಷ್ಠಿಸುವ ಕಾರ್ಮಿಕರ ಸಂರಕ್ಷಣೆಗಾಗಿ,ರೈತ ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧ, ಅಸಂಖ್ಯಾತ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ, ಮಂಗಳೂರಿನಲ್ಲಿ ವಿವಿಧ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಜರುಗಿತು.
ರೈತ ಕಾರ್ಮಿಕ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷ, ಕೃಷ್ಣಪ್ಪ ಸಾಲ್ಯಾನ್ ರವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರಡಿಸಿರುವ ಸುಗ್ರೀವಾಜ್ಞೆಗಳು ರೈತರ ಪಾಲಿಗೆ ಮರಣ ಶಾಸನವಾಗಿದ್ದು, ಅನ್ನದಾತರನ್ನು ಅನ್ನ ಬೇಡುವ ಬಿಕ್ಷುಕರನ್ನಾಗಿ ಮಾಡಲಿದೆ. ಮಾತ್ರವಲ್ಲದೆ ಇಡೀ ದೇಶವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಧಾರೆ ಎರೆದು ಕೊಡಲಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಐವನ್ ಡಿಸೋಜರವರು ಮಾತನಾಡಿ, ಇಡೀ ದೇಶದಲ್ಲಿ ಲಕ್ಷಾಂತರ ರೈತರು ಬೀದಿಗಿಳಿದು ಪ್ರಬಲ ಹೋರಾಟ ಮಾಡುತ್ತಿದ್ದರೂ,ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ನರೇಂದ್ರ ಮೋದಿ ಸರಕಾರ ಅಂಬಾನಿ ಅಧಾನಿಗಳ ಕೃಪಕಟಾಕ್ಷದಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಮಸೂದೆಗಳು ರೈತರ ಪಾಲಿಗೆ ಭಾರೀ ಅನುಕೂಲವಾಗಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರಧಾನಿಗಳು, ಯಾತಕ್ಕಾಗಿ ನಿಮ್ಮದೇ ಸರಕಾರದ ಮಹಿಳಾ ಸಚಿವೆಯೊಬ್ಬರು ರಾಜೀನಾಮೆ ನೀಡಿ ನಿಮ್ಮ ಸರಕಾರವನ್ನೇ ಧಿಕ್ಕರಿಸಿದರು ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಹೋರಾಟವನ್ನು ಬೆಂಬಲಿಸಿ ರೈತ ಸಂಘಟನೆಯ ನಾಯಕ ವಾಸುದೇವ ಉಚ್ಚಿಲ್, ದಲಿತ ಸಂಘಟನೆಯ ರಾಜ್ಯ ನಾಯಕ ಎಂ.ದೇವದಾಸ್,ಕಾರ್ಮಿಕ ಸಂಘಟನೆಯ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, HV ರಾವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಶಾಲೆಟ್ ಪಿಂಟೋ, DYFI ಜಿಲ್ಲಾ ನಾಯಕರಾದ ಅಶ್ರಫ್ ಕೆ.ಸಿ.ರೋಡ್, ಜನವಾದಿ ಮಹಿಳಾ ಸಂಘಟನೆಯ ನಾಯಕರಾದ ಜಯಂತಿ ಬಿ.ಶೆಟ್ಟಿ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಮೊಹಶಿರ್ ಸಾಮಾಣಿಗೆ ಮುಂತಾದವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ನಾಯಕರಾದ ಜಯಂತ ಅಂಬ್ಲಮೊಗರು,ಕಾರ್ಮಿಕ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ನೋಣಯ್ಯ ಗೌಡ, ನೀರಜ್ ಪಾಲ್,ವಿವೇಕ್ ರಾಜ್,ಕರುಣಾಕರ್,ಸಿರಾಜ್, ಸಿದ್ದೀಕ್,ಮುನೀರ್, ಮಹಿಳಾ ನಾಯಕರಾದ ಭಾರತಿ ಬೋಳಾರ,ಆಶಾ ಬೋಳೂರು, ವಿಲಾಸಿನಿ,ಕಾಂಗ್ರೆಸ್ ನಾಯಕರಾದ ಸದಾಶಿವ ಉಳ್ಳಾಲ,ಶುಭೋದಯ ಆಳ್ವ,ಎ.ಸಿ.ವಿನಯರಾಜ್, ಸಂತೋಷ್ ಕುಮಾರ್ ಶೆಟ್ಟಿ, ಭರತೇಶ್ ಅಮೀನ್, ಟಿ.ಕೆ.ಸುಧೀರ್,CPIM ಮುಖಂಡರಾದ ಯು.ಬಿ.ಲೋಕಯ್ಯ, ದಯಾನಂದ ಶೆಟ್ಟಿ,JDS ಮುಖಂಡರಾದ ಸುಮತಿ ಹೆಗ್ಡೆ,ಕವಿತಾ,ಸುಕನ್ಯಾ,ಪೂಜಾ ದೀಕ್ಷಿತಾ,ಯುವಜನ ನಾಯಕರಾದ ನವೀನ್ ಕೊಂಚಾಡಿ,ಸೊಹೈಲ್ ಕಂದಕ್, ಮಹಾಬಲ ದೆಪ್ಪಲಿಮಾರ್, ರಫೀಕ್ ಹರೇಕಳ,ನಾಸಿರ್ ಸಾಮಾಣಿಗೆ,ಮಾಜಿ ಮೇಯರ್ ಜೆಸಿಂತ ವಿಜಯ,ಮಾಜಿ ಉಪಮೇಯರ್ ಕವಿತಾವಾಸು, ಮಂಗಳೂರು ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ವಿಧ್ಯಾರ್ಥಿ ನಾಯಕ ಅಶಿತ್ ಪಿರೇರಾ,ಸಾಮಾಜಿಕ ಚಿಂತಕ ಅಶುಂತ ಡಿಸೋಜ, ಪ್ರಮೀಳಾ ದೇವಾಡಿಗ,ಸಾಮಾಜಿಕ ಹೋರಾಟಗಾರ ಪಿ.ವಿ.ಮೋಹನ್,ವಕೀಲರ ಸಂಘಟನೆಯ ನಾಯಕ ರಾಮಚಂದ್ರ ಬಬ್ಬುಕಟ್ಟೆ,ಚರಣ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.