ಭಟ್ಕಳ: ತಾಲೂಕಿನ ಶಿವ ಕ್ಷೇತ್ರಗಳಲ್ಲಿ ಸಾವಿರಾರು ಭಕ್ತರು ಭಕ್ತಿ ಭಾವದಿಂದ ದೇವರ ದರ್ಶನ ಪಡೆದರಲ್ಲದೇ ದೇವರಿಗೆ ಪೂಜೆ ಸಲ್ಲಿಸಿದರು.
ಪುರಾಣ ಪ್ರಸಿದ್ಧ ಕ್ಷೇತ್ರವಾದ ಮುರ್ಡೇಶ್ವರದಲ್ಲಿ ಬೆಳಗಿನ ಜಾವದಿಂದ ರಾತ್ರಿಯ ತನಕವೂ ಉದ್ದನೆಯ ಸರದಿಯ ಸಾಲು ಕಂಡು ಬಂದಿದ್ದು ಊರ ಹಾಗೂ ಪರ ಊರಿನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಿವರಾತ್ರಿಯ ಅಂಗವಾಗಿ ಶ್ರೀ ಮುರುಡೇರ್ಶವರ ದೇವರಿಗೆ ರುದ್ರಾಭಿಷೇಕ, ಬಿಲ್ವಾಅರ್ಚನೆ, ಮಹಾಪೂಜೆ ಇದ್ಯಾದಿಗಳು ನಡೆದು ರಾತ್ರಿ ಸ್ವರ್ಣ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶ್ರೀ ದೇವರ ದರ್ಶಣ ಪಡೆದು ಪೂಜೆ ಸಲ್ಲಿಸಿದರು. ಇವರೊಂದಿಗೆ ಭಟ್ಕಳದ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ, ಸಿವಿಲ್ ನ್ಯಾಯಾಧೀಶ ಆರ್. ನಾಗೇಂದ್ರ, ವಕೀಲರ ಸಂಘದ ಅಧ್ಯಕ್ಷ ಆರ್. ಆರ್. ಶ್ರೇಷ್ಟಿಯವರು ಕೂಡಾ ಶ್ರೀ ದೇವರ ದರ್ಶನ ಪಡೆದರು.
ಭಟ್ಕಳ ಬಂದರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕುಟುಮೇಶ್ವರ ದೇವಸ್ಥಾನದಲ್ಲೂ ಕೂಡ ಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮುಂತಾದವು ನಡೆದವು. ನಗರ ಮಧ್ಯದಲ್ಲಿರುವ ಪುರಾತನ ಚೋಳೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನ, ಆಸರಕೇರಿಯ ವಿರೂಪಾಕ್ಷ ದೇವಸ್ಥಾನ, ಪಶುಪತಿ ದೇವಸ್ಥಾನ, ಮೂಡಭಟ್ಕಳದ ಈಶ್ವರ ದೇವಸ್ಥಾನ, ಬೈಲೂರಿನ ಮಾರ್ಕಾಂಡೇಶ್ವರ, ಮಾರೂಕೇರಿಯ ಕೊಡಕಿಯ ಶಂಭುಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ಎಲ್ಲಾ ಶಿವಾಲಯಕ್ಕೂ ಕೂಡಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ಶಿವರಾತ್ರಿ ಪ್ರಯುಕ್ತ ಅಭಿಷೇಕ, ಅರ್ಚನೆಗಳನ್ನು ಮಾಡಿಸಿದರು.
ಶಿವರಾತ್ರಿಯ ಪ್ರಯುಕ್ತ ತಾಲೂಕಿನ ಶಿವತಾಣವಷ್ಟೇ ಅಲ್ಲದೇ ಬೇರೆ ಬೇರೆ ದೇವಸ್ಥಾನಗಳಿಗೂ ಕೂಡಾ ಭಕ್ತರು ಆಗಮಿಸಿ ಭಕ್ತಿ ಭಾವದಿಂದ ಪೂಜಿಸಿದರು. ವರ್ಷಂಪ್ರತಿಯಂತೆ ಭಟ್ಕಳದ ನೂರಾರು ಜನರು ಸಾಗರ ತಾಲೂಕಿನ ಕಾಡಿನಲ್ಲಿ ಎತ್ತರದಲ್ಲಿ ಬೃಹತ್ ಕಲ್ಲು ಬಂಡೆ ಮಧ್ಯದಲ್ಲಿರುವ ಅತಿ ಪುರಾತನ ದೇವಾಲಯವಾದ ಭೀಮೇಶ್ವರಕ್ಕೆ ತೆರಳಿ ತೀರ್ಥ ಸ್ನಾನ, ಪೂಜೆ ಸಲ್ಲಿಸಿದರು. ತಾಲೂಕಿನಲ್ಲಿ ಶಿವರಾತ್ರಿಯ ಉತ್ಸವಗಳು ಶಾಂತಿಯುತವಾಗಿ ನಡೆದಿದ್ದು ಹಲವೆಡೆ ರಾತ್ರಿ ಅಖಂಡ ಭಜನೆ, ಧಾರ್ಮಿಕ ಕಾರ್ಯಕ್ರಮಗಳು, ಜಾಗರಣೆಗಳನ್ನು ಹಮ್ಮಿಕೊಳ್ಳಲಾಗಿದೆ.